- ಕುಶಲ
ಕನ್ನಡಕ್ಕಾಗಿ ತಮ್ಮ ಬಾಳನ್ನೇ ಮುಡಿಪಾಗಿಟ್ಟಿದ್ದವರನ್ನು ಸ್ಮರಿಸುವ ಬಗ್ಗೆ ನಮ್ಮ ನಾಡಿನ ರಾಜಕಾರಣಿಗಳಿಗೆ ಎಳ್ಳಷ್ಟೂ ಕಾಳಜಿ ಇಲ್ಲದಿರುವುದಕ್ಕೆ ಇಲ್ಲಿದೆ ಒಂದು ಉದಾಹರಣೆ: ತಮ್ಮ ಅಪರಿಮಿತ ಕನ್ನಡಾಭಿಮಾನದಿಂದ, ಕನ್ನಡ ಸಾರಸ್ವತ ಲೋಕದ ಅನಭಿಷಿಕ್ತ ದೊರೆಯಾಗಿದ್ದ ‘ಅನಕೃ’ ಯಾವ ಅಧಿಕಾರದಾಸೆಗೂ ವಾಲದೆ ಆರಿಸಿಕೊಂಡದ್ದು ಕನ್ನಡ ಕಟ್ಟುವ ಕೆಲಸವನ್ನು. ಕರ್ನಾಟಕದ ಏಕೀಕರಣಕ್ಕಾಗಿ, ಕನ್ನಡಿಗರ ಸ್ವಾಭಿಮಾನದ ಜೀವನಕ್ಕಾಗಿ, ಕನ್ನಡ ಜಾಗೃತಿಗಾಗಿ ಬೀದಿಗಿಳಿದು ಹೋರಾಡಿದವರಲ್ಲಿ ಅವರು ಮೊದಲಿಗರು.
ವಿಪರ್ಯಾಸವೆಂದರೆ, ಅನಕೃ ನೆನಪುಗಳನ್ನು ಶಾಶ್ವತವಾಗಿಡುವ ಅವರ ಸ್ಮಾರಕ ನಿರ್ಮಾಣ ಇನ್ನೂ ನನೆಗುದಿಗೆ ಬಿದ್ದಿರುವುದು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, 2006ರಲ್ಲಿ ಅನಕೃ ಅಭಿಮಾನಿಗಳ ಒತ್ತಾಸೆಗೆ ಸ್ಪಂದಿಸಿ, ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರದಲ್ಲಿ ಯಡಿಯೂರಪ್ಪನವರು ಅನಕೃ ಸ್ಮಾರಕ ಸ್ಥಾಪನೆಗೆ ನಿವೇಶನ ಮಂಜೂರು ಆದೇಶಕ್ಕೆ ಕಾರಣರಾದರು. ಆದರೆ ಈ ಸ್ಥಳ ವಿವಾದಕ್ಕೊಳಪಟ್ಟಿದ್ದು ಕಾನೂನು ತಗಾದೆಯಿಂದ ಸ್ಮಾರಕ ನಿರ್ಮಾಣ ಸ್ಥಗಿತವಾಗಿದೆ.
ಅಚ್ಚ ಕನ್ನಡಿಗ ಅನಕೃ ಅವರ ಸ್ಮಾರಕ ಸ್ಥಾಪನೆಗೆ ಎದುರಾಗಿರುವ ಅಡೆತಡೆಗಳನ್ನು ಸರಿಪಡಿಸಿ, ಮರುಚಾಲನೆಗೆ ಕ್ರಮ ತೆಗೆದುಕೊಳ್ಳುವ ನಿಜವಾದ ಕನ್ನಡಪರ ಕಾಳಜಿ, ಇಚ್ಛಾಶಕ್ತಿಯನ್ನು ಯಾರು ಕರುಣಿಸುವರೋ ತಿಳಿಯಲಾಗಿದೆ..!