ಸಾರ್ವಜನಿಕರ ಸಮಸ್ಯೆಗಳಿಗೆ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಬೇಕು: ಡಾ.ವೈಎಸ್. ರವಿಕುಮಾರ್

0
5

ಕಲಬುರಗಿ: ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ವಿವಿಧ ಸಮಸ್ಯೆಗಳ ಬಗ್ಗೆ ಬಹಳಷ್ಟು ಭರವಸೆ ಇಟ್ಟುಕೊಂಡು ಬರುತ್ತಾರೆ. ಅವರ ಅಹವಾಲು ಕೇಳಿ ಸಕಾರಾತ್ಮಕ ಸ್ಪಂದಿಸಿ, ಸಂತುಷ್ಟಗೊಳಿಸಬೇಕು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈಎಸ್. ರವಿಕುಮಾರ್ ಅವರು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸೋಮವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ಹಾಗೂ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ೨೦ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ, ಪೆರೇಡ್ ವೀಕ್ಷಿಸಿದ ಬಳಿಕ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಾನೂನು ವಿಷಯ, ಕರ್ತವ್ಯ ನಿರ್ವಹಣೆ, ಅಪರಾಧಗಳ ತನಿಖೆ, ಟ್ರಾಫಿಕ್ ನಿರ್ವಹಣೆ, ಠಾಣೆಯ ರಿಜಿಸ್ಟರ್ ನಿರ್ವಹಣೆ, ಪೊಲೀಸ್ ನಾಯಕತ್ವ ಮುಂತಾದವುಗಳ ವಿಷಯದಲ್ಲಿ ಸುಧೀರ್ಘ ತರಬೇತಿ ಪಡೆದಿದ್ದೀರಿ. ಈ ಮೂಲಕ ನೀವು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಪೊಲೀಸ್ ಠಾಣೆಗಳ ಮಟ್ಟದಲ್ಲಿ ಕರ್ತವ್ಯದ ಬಗ್ಗೆ ಕಲಿಯುವುದು ಬಹಳಷ್ಟು ಇದೆ. ಆದ್ದರಿಂದ ತಪ್ಪದೇ ಪ್ರತಿದಿನ ಠಾಣೆಗಳಿಗೆ ಹಾಜರಾಗಬೇಕು ಎಂದು ತಿಳಿಸಿದ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಶಾ ಪಂತ್ ಅವರು ಸ್ವಾಗತಿಸಿ ಮಾತನಾಡುತ್ತಾ, ೮ ತಿಂಗಳುಗಳ ಕಾಲ ತರಬೇತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಶುಭಹಾರೈಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪ್ರಸನ್ನ ದೇಸಾಯಿ ಅವರು ವರದಿ ವಾಚನ ಮಾಡಿ, ಕಲಬುರಗಿಯ ತಾತ್ಕಾಲಿಕ ತರಬೇತಿ ಶಾಲೆಯಲ್ಲಿ ಇದುವರೆಗೆ ೨೦ ತಂಡಗಳಲ್ಲಿ ೨೪೪೪ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ ಎಂದು ತಿಳಿಸಿದರು. ೨೦ ನೇ ತಂಡದಲ್ಲಿ ಒಳಾಂಗಣ, ಹೊರಾಂಗಣ ಹಾಗೂ ವಿಶೇಷ ಕರ್ತವ್ಯಗಳ ಕುರಿತು ಅತ್ಯುತ್ತಮ ತರಬೇತಿ ಪಡೆದಿದ್ದು, ದೇಶಕ್ಕೆ ಉತ್ತಮ ಸೇವೆ ಹಾಗೂ ಇಲಾಖೆಗೆ ಒಳ್ಳೆಯ ಹೆಸರು ತರಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರು ಪ್ರಶಿಕ್ಷಾಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ೨೦ನೇ ತಂಡದ ಪ್ರಶಿಕ್ಷಣಾರ್ಥಿಗಳಿಗೆ ಹೊರಾಂಗಣ, ಒಳಾಂಗಣ, ಫೈರಿಂಗ್ ವಿಭಾಗದ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಸರ್ವೋತ್ತಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರು ಮತ್ತು ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಡ್ಡೂರು ಶ್ರೀನಿವಾಸಲು, ಕಲಬುರಗಿ ಕೆಎಸ್‌ಆರ್‌ಪಿ ೬ನೇ ಬೆಟಾಲಿಯನ್‌ನ ಕಮಾಂಡೆಂಟ್ ಬಸವರಾಜ ಜಿಲ್ಲೆ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕ ಪ್ರವೀಣ್ ಕುಮಾರ್, ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಸಂತೋಷ್ ಪಾಟೀಲ್, ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಯಾನಂದ ಪಾಟೀಲ್ ಮುಂತಾದವರು ಇದ್ದರು. ಡಿಎಆರ್ ಕಾನ್ಸ್‌ಟೇಬಲ್ ಸುರೇಶ್ ಪಾಟೀಲ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಪ್ರಥಮ ದರ್ಜೆ ಗುಮಸ್ತೆ ಮಲ್ಲಮ್ಮ ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here