ಕಲಬುರಗಿ: ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಇಲ್ಲಿನ ಬಯಲು ಗ್ರಂಥಾಲಯದ ಪುನರಾರಂಭ ಹಾಗೂ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮವನ್ನು ಇಲ್ಲಿನ ಕುಸನೂರು ರಸ್ತೆಯ ಜಿಡಿಎ ಬಡಾವಣೆಯ ತಿಲಕನಗರ ಉದ್ಯಾನವನದ ಶಿವಮಂದಿರ ಆವರಣದಲ್ಲಿ ಸರಳವಾಗಿ ನಡೆಸಲಾಯಿತು.
ತಿಲಕನಗರ ಕ್ಷೇಮಾಭಿವೃದ್ಧಿ ಸಂಘ, ಓಂ ಶಿವ ಯೋಗ ಕೇಂದ್ರ, ಪತಂಜಲಿ ಯೋಗ ಕೇಂದ್ರ ಹಾಗೂ ಬಯಲು ಗ್ರಂಥಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಶಶಿಶೇಖರ ರಡ್ಡಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದುವ ಹವ್ಯಾಸ ಕಡಿಮೆ ಆಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿ, ಪುಸ್ತಕಗಳನ್ನು ಓದುವುದಿರಂದ ಜ್ಞಾನ ವೃದ್ಧಿಗೆ, ವಿಷಯಗಳ ಚಿಂತನೆಗೆ ಅವಕಾಶ ದೊರೆಯುತ್ತದೆ. ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಸಾಧನೆಗೆ ಸಹಕಾರಿ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: 27 ರಂದು ಗುಲ್ಬರ್ಗ ವಿವಿ ಘಟಿಕೋತ್ಸವಕ್ಕೆ ರಾಜ್ಯಪಾಲರ ಆಗಮನ
ತಿಲಕನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಅವರು ಸ್ವಾಗತಿಸಿ, ಪುಸ್ತಕಗಳನ್ನು ಪ್ರಕಟಿಸುವುದು ಹಾಗೂ ಅವುಗಳನ್ನು ಮಾರಾಟ ಮಾಡುವುದು ದೊಡ್ಡ ಸಾಹಸದ ಕೆಲಸವಾಗಿವೆ. ಪುಸ್ತಕಗಳ ಕೊಳ್ಳುವವರ ಸಂಖ್ಯೆ, ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪುಸ್ತಕ ವ್ಯಾಪಾರಿಗಳು ಕೂಡಾ ತೀವ್ರ ತೊಂದರೆಯಲ್ಲಿದ್ದಾರೆ ಎಂದು ಹೇಳಿದರು.
ಅಕ್ಷರಸ್ತರೆಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿ ತಿಂಗಳು ಕನಿಷ್ಠ ಎರಡು ಪುಸ್ತಕಗಳನ್ನಾದರೂ ಖರೀದಿ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದು ನಮಗೆ ಮಾತ್ರವಲ್ಲದೆ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿದು ಅವರ ಜ್ಞಾನ ವಿಕಾಶಕ್ಕೆ ಸಹಕಾರಿ ಆಗುತ್ತದೆ ಎಂದು ನುಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಕಳೆದ ೨೦ ವರ್ಷಗಳ ಹಿಂದೆ ಆರಂಭಿಸಲಾದ ಬಯಲು ಗ್ರಂಥಾಲಯ, ರಾಜ್ಯದಲ್ಲಿ ಮಾದರಿಯ ಗ್ರಂಥಾಲವಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಾರಂಭವಾಗಿದ್ದು ಶ್ಲಾಘನೀಯ. ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅಗತ್ಯ. ಬಯಲು ಗ್ರಂಥಾಲಯಕ್ಕೆ ತಾವೂ ಕೂಡಾ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಬೆಳೆ ವಿಮೆ ಕಂತು ಕಟ್ಟಿದ ರೈತರಿಗಿಲ್ಲ ಪರಿಹಾರ
ಬಡಾವಣೆಯ ಹಿರಿಯ ರಾಜಕಾರಣಿ ಶಾಮ ನಾಟೀಕಾರ್ ಅಧ್ಯಕ್ಷತೆ, ಬಡಾವಣೆಯ ನಾಗರಿಕರು, ಯುವಕರು, ವಿದ್ಯಾರ್ಥಿಗಳು ಪ್ರತಿನಿತ್ಯ ಒಂದು ಓದಲು ಅನುಕೂಲವಾಗುವಂತೆ ಹಾಗೂ ಮಳೆ-ಗಾಳಿ-ಬಿಸಿಲಿಗೆ ಪುಸ್ತಕಗಳು, ಪತ್ರಿಕೆಗಳು ಹಾಳಾಗದಂತೆ ಸುಸಜ್ಜಿಯವಾದ ವ್ಯವಸ್ಥೆ ಮಾಡಿ ಕೊಡುವುದಾಗಿ ಹೇಳಿದರು.
ಬಯಲು ಗ್ರಂಥಾಲಯದ ಸಂಸ್ಥಾಪಕ, ಸಂಚಾಲಕ ಸುಭಾಷ ಬಣಗಾರ ಅವರು ಬಯಲು ಗ್ರಂಥಾಲಯ ಆರಂಭದ ಉದ್ದೇಶ, ಬೆಳೆದು ಬಂದ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾ ಅಧ್ಯಕ್ಷರಾಗಿ ಚುನಾಯಿತರಾದ ಬಾಬುರಾವ್ ಯಡ್ರಾಮಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ವಿಶೇಷ ಅಧಿಕಾರಿ ಡಾ.ರಾಘವೇಂದ್ರ ಗುಡಗುಂಟಿ, ವೆಂಕಟೇಶ ಮುದಗಲ್, ಪ್ರಶಾಂತ, ರಾಜೇಂದ್ರ ಮೆಹತಾ, ನಾಗಪ್ಪ, ಯಲ್ಲಾಲಿಂಗ ಪಾಟೀಲ್, ಚೆನ್ನಪ್ಪ ಸುರ್ಮಿ ಮತ್ತು ಮಾಣಿಕ್ ರಾವ್, ವೀರಣ್ಣ ಎಸ್.ಟಿ., ಶಶಿಕಾಂತ ಮೀಸೆ ದಂಪತಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಚಿಂಚೋಳಿ ಆರೋಗ್ಯ ಮೇಳ: ಪ್ರತಿಯೊಬ್ಬರು ಆರೋಗ್ಯ ಕಾರ್ಡ್ ಪಡೆಯಲು ಕೇಂದ್ರ ಸಚಿವ ಭಗವಂತ ಖೂಬಾ ಕರೆ