ವಚನ ಸಾಹಿತ್ಯ ರಕ್ಷಕ ಫ.ಗು. ಹಳಕಟ್ಟಿ: ಗದಗ ತೋಂಟದಾರ್ಯ ಮಠದ ಶಂಕ್ರಣ್ಣ ಅಂಗಡಿ

0
17

ಶಹಾಪುರ: ೨೬ : ಫ.ಗು.ಹಳಕಟ್ಟಿಯವರು ೧೨ ನೇ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸದೆ ಹೋಗಿದ್ದರೆ ನಾವೆಲ್ಲ ಬಹುದೊಡ್ಡ ಸಂಪತ್ತಿನಿಂದ ವಂಚಿತರಾಗುತ್ತಿದ್ದೇವು. ತಮ್ಮ ಮನೆಯ ಸಂಪತ್ತನ್ನು ಮಾರಿ ಸಾಮಾಜಿಕ ಚಿಂತನೆಯನ್ನು ಹೆಚ್ಚಿಸಲು ಪ್ರೇರಕವಾದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿದವರಲ್ಲಿ ಫ.ಗು. ಹಳಟ್ಟಿಯವರು ಪ್ರಮುಖರು ಎಂದು ಗದಗ ತೋಂಟದಾರ್ಯ ಮಠದ ಶಂಕ್ರಣ್ಣ ಅಂಗಡಿಯವರು ಅಭಿಪ್ರಾಯ ಪಟ್ಟರು.

ನಗರದ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ತಿಂಗಳ ಬೆಳಕು /೧೦೨ ರ ಸಭೆಯಲ್ಲಿ ಲಿಂ. ಬಸ್ಸಣ್ಣ ,ಲಿಂ. ಪರಮವ್ವ ಇಜೇರಿಯವರ ಸ್ಮರಣೆಯಲ್ಲಿ , ’ಕನ್ನಡ ನಾಡಿಗೆ ಫ.ಗು.ಹಳಕಟ್ಟಿಯವರ ಕೊಡುಗೆ’ ಎಂಬ ವಿಷಯ ಕುರಿತು ಮಾತನಾಡಿದರು. ಮನೆ ಹೆಂಡತಿ ಮಕ್ಕಳು ಆಸ್ತಿ ಉದ್ಯೋಗ ಇತ್ಯಾದಿಗಳನ್ನು ಕಡೆಗಣಿಸಿ ಸ್ವಂತದ ಸುಖವನ್ನು ಬದಿಗಿಟ್ಟು ಸಮಾಜದ ಸ್ವಾಸ್ಥ್ಯಕ್ಕೆ ಬಸವಾದಿ ಶರಣರ ವಚನಗಳ ಕಟ್ಟುಗಳನ್ನು ಮನೆಯಿಂದ ಮನೆಯಲ್ಲಿ ಹುಡುಕಿ ಸಂಗ್ರಹಿಸಿ, ಪ್ರಕಟಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ ಎಂದರು. ಒಳ್ಳೆಯವರಿಗೆ ಕಷ್ಟಗಳು ಗುಳೆ ಕಟ್ಟಿಕೊಂಡು ಬರುತ್ತವೆ ಎನ್ನುವಂತೆ ಹಳಕಟ್ಟಿಯವರ ಬಾಲ್ಯ ಯೌವ್ವನ ಹಾಗೂ ಕೊನೆಗಾಲದಲ್ಲೂ ಅವರನ್ನು ತಿಕ್ಕಿ ಮುಕ್ಕಿ ಕಾಡಿದವು.

Contact Your\'s Advertisement; 9902492681

ಶರಣರ ವಚನ ಸಾಹಿತ್ಯ ಸಂಗ್ರಹಕ್ಕೆ ನಾನು ಹುಟ್ಟಿ ಬಂದಿದ್ದೇನೆ ಎಂಬಂತೆ ತಾವು ನಂಬಿದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಮೂಲ್ಯವಾದ ಕರಗದ ಸಂಪತ್ತನ್ನು ನಮಗೆ ಧಾರೆ ಎರೆದಿದ್ದಾರೆ. ಅಂದಿನ ಅನಾಕರ್ಷಕ ದಿನಗಳಲ್ಲಿ ಶಿವಾನುಭವ ಎಂಬ ಪತ್ರಿಕೆಯನ್ನು ಹುಟ್ಟು ಹಾಕಿ ಆ ಮೂಲಕ ವಚನ ಸಾಹಿತ್ಯ ಮನೆ ಮನಕ್ಕೆ ತಲುಪಲು ಅಹರ್ನಿಶಿ ಶ್ರಮಿಸಿದ್ದಾರೆ. ವಕಾಲತ್ತು ಹುದ್ದೆಯನ್ನು ಮುಂದುವರೆಸಿಕೊಂಡು ಹೋಗಿದ್ದರೆ ಹೈಕೋರ್ಟ ನ್ಯಾಯಾಧೀಶರಾಗಿ ನಿವೃತ್ತಿಯಾಗಬಹುದಿತ್ತು. ಆದರೆ ಅವರಿಗೆ ಸಮಾಜ ಕೊಡುವ ಸ್ಥಾನಮಾನ ಹಾಗೂ ದುಡ್ಡಿಗಿಂತ ಮುಖ್ಯ ಶರಣರ ವಿಚಾರಗಳನ್ನು ಜನತೆಗೆ ತಲುಪಿಸುವ ತವಕ ಹೆಚ್ಚಾಗಿತ್ತು. ತಾವು ಅರಿದ ಬಟ್ಟೆಯನ್ನು ಉಡುವುದು ಖೇದ ಸಂಗತಿಯಾಗಿರಲಿಲ್ಲ, ಜನರು ಬಟ್ಟೆ ತಪ್ಪಬಾರದೆಂದು ಚಿಂತಿಸಿ ಕಾರ್ಯಪ್ರವೃತ್ತರಾದರು ಎಂದು ಬಣ್ಣಿಸಿದರು.

ಒಬ್ಬ ವ್ಯಕ್ತಿ ಕೇವಲ ಒಂದು ಕೆಲವನ್ನು ಮಾತ್ರ ಮಾಡಲಾರ. ಆತನಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುಕ್ಕೆ ಸಾಕ್ಷಿ ಎಂಬಂತೆ ಹಲವಾರು ಜನಪರವಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಂಡು ಸಮಾಜದ ಕತ್ತಲನ್ನು ಕಳೆದು ಜ್ಞಾನದ ದೀಪ ಹಚ್ಚಿದರು. ಮಹಿಳೆಯರಿಗಾಗಿ ಶಾಲೆ ಕಾಲೇಜು, ರೈತರಿಗಾಗಿ, ಜನ ಸಾಮಾನ್ಯರಿಗಾಗಿ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ, ಶ್ರೀ. ಸಿದ್ದೇಶ್ವರ ಸಹಕಾರಿ ಬ್ಯಾಂಕ್, ಅಲ್ಲದೆ ಅಲ್ಲಲ್ಲಿ ಕೆರೆಗಳನ್ನು ತೆಗೆಯಿಸಿ ಜನಾನುರಾಗಿಯಾಗಿ ಬೆಳಗಿದರು ಎಂದು ಸಭೆಗೆ ವಿವರಿಸಿದರು.

ಸಸಿಗೆ ನೀರೆರೆಯುವ ಮೂಲಕ ಸಭೆಯನ್ನು ಉದ್ಘಾಟಿಸಿದ ಡಾ. ಬಸವರಾಜ ಇಜೇರಿ ಮಾತನಾಡಿ ಬಸವಾದಿ ಶರಣರ ವಚನ ಸಾಹಿತ್ಯ ಆಶಯಗಳ ವಿಚಾರ ಕರ್ನಾಟಕದಲ್ಲಿ ಗುಪ್ತ ಗಾಮಿನಿಯಾಗಿ ಹರಿದಾಡುತ್ತಿರುವುದರಿಂದಲೆ ಸರ್ವ ಜನಾಂಗದ ಶಾಂತಿಯ ತೋಟವೆಂದು ಕರೆಯಲಾಗುತ್ತದೆ ಎಂದು ತಿಳಿಸಿದರು. ಸತ್ಯಂಪೇಟೆ ಕುಟುಂಬ ಒಂದು ದಶಕದ ಹಿಂದಿನಿಂದ ವಚನ ಸಾಹಿತ್ಯ ಹಾಗೂ ಅವುಗಳ ಆಶಯಕ್ಕೆ ತುಡಿಯುತ್ತ ಹೊರಟಿದ್ದರಿಂದ ಬಹಳಷ್ಟು ಪ್ರತಿಭೆಗಳು ಹೊರ ಬಂದಿವೆ. ಸತ್ಯಂಪೇಟೆ ಕುಟುಂಬ ಬರೀ ಹೊಟ್ಟೆಗೆ ಅಷ್ಟೆ ಊಟ ಹಾಕುವುದಿಲ್ಲ. ಅದು ನೆತ್ತಿಯನ್ನು ತುಂಬಿಸುವ ಕೆಲಸ ಮಾಡುತ್ತಿದೆ ಎಂದು ಮನಂಬುಗುವಂತೆ ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಬಸವಾದಿ ಶರಣರ ಜಯಂತೋತ್ಸವ ಬಹುತೇಕ ಕಡೆ ಅದ್ಧೂರಿಯಾಗಿ ಜರುಗುತ್ತಿವೆ. ಇದೇನೋ ಸಂತೋಷ ಸಂಗತಿ. ಹಿಂದೆ ಬರೀ ಕೇಸರಿ ಧ್ವಜಗಳು ಮಾತ್ರ ಹಾರಾಡುತ್ತಿದ್ದವು. ಅಲ್ಲಿ ಬಸವಣ್ಣನವರ ಅಸ್ಮಿತೆ ಇರಲಿಲ್ಲ. ಈಗಲ್ಲಿ ಬಸವಣ್ಣನವರ ಭಾವಚಿತ್ರ ಬಂದಿದೆ. ಮುಂದಿನ ದಿನಗಳಲ್ಲಿ ಲಿಂಗಾಯತರು ಬಸವಾದಿ ಶರಣರ ತತ್ವ ಅರಿತುಕೊಂಡು ಆಚರಿಸಬೇಕಾಗಿದೆ ಎಂಬ ಆಶಯವನ್ನು ವ್ಯಕ್ತ ಪಡಿಸಿದರು.

ಬಸವಮಾರ್ಗ ಪ್ರತಿಷ್ಠಾನ ಯುವಕರಿಗೆ ಮಕ್ಕಳಿಗೆ ವಚನ ಸಾಹಿತ್ಯದ ಸವಿ ರುಚಿಯನ್ನು ಹಚ್ಚುವ ಕೆಲಸವನ್ನು ಮಾಡಬೇಕು. ಸಾಮಾಜಿಕ ಬದಲಾವಣೆ ಆರಂಭವಾಗುವುದೆ ಯುವಕರಿಂದ ಎಂಬುದನ್ನು ಅರಿತು ರಚನಾತ್ಮಕ ಕೆಲಸವನ್ನು ಪ್ರತಿಷ್ಠಾನ ಮಾಡಲಿ ಎಂಬ ಸದಾಶಯವನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಗುಂಡಣ್ಣ ತುಂಬಗಿ ಹೇಳಿದರು.

ಮುಡಬೂಳ ರಂಗಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥ ಶಿವಯೋಗಪ್ಪ ಹವಾಲ್ದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಕುಮಾರ ಕರದಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಕು.ಸಾಕ್ಷಿ ಬಸವರಾಜ ಹುಣಸಗಿ ವಚನ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ಸ್ವಾಗತಿಸಿದರು. ರಾಜು ಕುಂಬಾರ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಡಾ.ಸಾಹೇಬಣ್ಣ ಮುಡಬೂಳ, ಬಸವರಾಜ ಗುಡಗುಂಟಿ, ಸಿದ್ದು ಕೆರವಂಟಿಗಿ, ವಿಶ್ವನಾಥ ಬುಂಕಲದೊಡ್ಡಿ, ಕಾಮಣ್ಣ ವಿಭೂತಿ ಹಳ್ಳಿ, ಶ್ರೀಮತಿ ಮಹಾದೇವಿ ವಡಿಗೇರಿ, ಶ್ರೀ ಮತಿ ನಿಂಗಮ್ಮ ಗ್ವಾಡಿಹಾಳ, ಚಂದ್ರಕಲಾ ಕೆಂಭಾವಿ, ಅಂಬ್ರಮ್ಮ ಕುರಕುಂದಿ, ಹೊನ್ನರೆಡ್ಡಿ ವಕೀಲರು, ಅಡಿವೆಪ್ಪ ಜಾಕಾ, ಸಿದ್ಧಲಿಂಗಪ್ಪ ಆನೇಗುಂದಿ, ಬಸವರಾಜ ಹುಣಸಗಿ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here