ವಾಡಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮಿತಿಮೀರಿದ ಭ್ರಷ್ಟಾಚಾರವನ್ನು ಖಂಡಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್ಯುಸಿಐ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ದೇಶದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಪಾಲುದಾರರಾಗಿದ್ದಾರೆ. ಕಾಂಗ್ರೆಸ್ಗಿಂತಲೂ ಉತ್ತಮ ಆಡಳಿತ ನೀಡುವುದಾಗಿ ಒಳ್ಳೆಯ ದಿನಗಳ ಕನಸು ತೋರಿಸಿ ಅಧಿಕಾರಕ್ಕೇರಿದ ಬಿಜೆಪಿ, ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿಸಿ ಬಡವರ ಬದುಕಿನ ಮೇಲೆ ಬರೆ ಎಳೆದಿದೆ. ತೈಲ ಬೆಲೆ ಏರಿಕೆಯಿಂದ ಎಲ್ಲಾ ರೀತಿಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕಾಂಗ್ರೆಸ್ ಬಡಜನರ ಎದೆಗೆ ಮುಂದಿನಿಂದ ಚೂರಿ ಇರಿದರೆ, ಬಿಜೆಪಿ ಹಿಂದಿನಿಂದ ಪ್ರಹಾರ ನಡೆಸಿದೆ. ಈ ಎರಡೂ ಪಕ್ಷಗಳು ಬಂಡವಾಳಶಾಹಿಗಳ ಹಿತವನ್ನು ಕಾಪಾಡುವ ಕಾಲಾಳುಗಳಾಗಿವೆ ಎಂದು ಟೀಕಿಸಿದರು.
ಉದ್ಯೋಗಗಳು ಕಡಿತಗೊಂಡು ಮತ್ತಷ್ಟು ನಿರುದ್ಯೋಗ ಸಮಸ್ಯೆ ಗಂಭೀರ ರೂಪ ತೆಳೆದಿದೆ. ಜಾಗತೀಕರಣ ನೀತಿಗಳು ಯುವಜನರನ್ನು ಬೀದಿಪಾಲು ಮಾಡಿವೆ. ನೇಮಕಾತಿ ಅಕ್ರಮಗಳು ಬಯಲಾಗುಯವ ಮೂಲಕ ಭ್ರಷ್ಟಾಚಾರದ ವಿರಾಟ ರೂಪದ ದರ್ಶನವಾಗಿದೆ.
ತಿಭಾವಂತರು ಉದ್ಯೋಗ ಅವಕಾಶಗಳಿಂದ ವಂಚಿತರಾಗಲು ಭ್ರಷ್ಟಾಚಾರದ ಜಾಲವೇ ಕಾರಣ ಎಂಬುದು ಬಯಲಾಗಿದೆ. ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಯಲ್ಲಿ ಶೇ.೪೦ ಕಮಿಷನ್ ದಂಧೆಯ ರೋಗ ಅಂಟಿಕೊಂಡಿದ್ದು, ಜನರ ತೆರಿಗೆ ಹಣ ಲೂಟಿಕೋರರ ಜೇಬು ಸೇರುತ್ತಿದೆ. ಬಡಜನರನ್ನು ಕಡಿದು ತಿನ್ನುತ್ತಿರುವ ಜ್ವಲಂತ ಸಮಸ್ಯೆಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಕಮಿಷನ್ ದಂಧೆ, ಅಕ್ರಮ ಪರೀಕ್ಷೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವನತಿಗೆ ತಂದು ನಿಲ್ಲಿಸಿವೆ. ಇವುಗಳ ವಿರುದ್ಧ ಜನತೆ ಪ್ರಬಲ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಮುಖಂಡರಾದ ಗುಂಡಣ್ಣ ಎಂ.ಕೆ, ವೆಂಕಟೇಶ ದೇವದುರ್ಗ, ಶರಣು ಹೇರೂರ, ಗೋವಿಂದ ಯಳವಾರ, ದತ್ತು ಹುಡೇಕರ, ಈರಣ್ಣ ಇಸಬಾ, ಸಿದ್ಧಾರ್ಥ ಹಳಕರ್ಟಿ, ರಾಜು ಒಡೆಯರಾಜ, ಶಿವುಕುಮಾರ ಆಂದೋಲಾ, ಕೋಕಿಲಾ ಹೇರೂರ, ಪದ್ಮರೇಖಾ ವೀರಭದ್ರಪ್ಪ, ಗೋದಾವರಿ ಪರತೂರಕರ, ಸೀತಾಬಾಯಿ ಹೇರೂರ, ಲಕ್ಷ್ಮೀ, ಅರ್ಪಿತಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.