ಬೆಂಗಳೂರು: ದಿನಾಂಕ 28 ಮತ್ತು 29 ಜೂನ್ 2022ರಂದು ನಡೆದ 47ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಿದಂತೆ ‘ಪೂರ್ವ ಪ್ಯಾಕೇಜ್ ಮತ್ತು ಲೇಬಲ್’ ಮಾಡಿರುವ ಆಹಾರಧಾನ್ಯಗಳ ಮೇಲೆ ಶೇಕಡ 5ರ ಜಿ.ಎಸ್.ಟಿ. ತೆರಿಗೆಯನ್ನು ವಿಧಿಸಲಾಗಿದೆ. ಮುಖ್ಯವಾಗಿ ಧಾನ್ಯಗಳು, ಗೋಧಿ, ಬಾರ್ಲಿ, ಓಟ್ಸ್, ಮೆಕ್ಕೆ ಜೋಳ, ಅಕ್ಕಿ, ಸಿರಿಧಾನ್ಯಗಳು, ಬಿಳಿ ಜೋಳ, ರಾಗಿ, ಬೇಳೆ ಕಾಳುಗಳು ಮತ್ತು ಅವುಗಳ ಹಿಟ್ಟು. ಈ ಮೊದಲು ಆಹಾರಧಾನ್ಯಗಳಿಗೆ ‘ಬ್ರ್ಯಾಂಡ್ ಹೆಸರಿನಡಿಯಲ್ಲಿ ಕಂಟೇನರ್ಗಳಲ್ಲಿ ಪ್ಯಾಕ್ ಮಾಡಿದಲ್ಲಿ’ ತೆರಿಗೆಯನ್ನು ವಿಧಿಸಲಾಗುತ್ತಿತ್ತು.
ಕೆಲವು ಕಂಪನಿಗಳು ಜಿ.ಎಸ್.ಟಿ. ತೆರಿಗೆಯಿಂದ ತಪ್ಪಿಸಿಕೊಳ್ಳಲು ತಮ್ಮ ಬ್ರ್ಯಾಂಡ್ ಹೆಸರುಗಳನ್ನು ಬಿಟ್ಟುಕೊಡಲು ಪ್ರಾರಂಭಿಸಿದ್ದರಿಂದ ಸರ್ಕಾರಕ್ಕೆ ಗಣನೀಯ ಮೊತ್ತದ ತೆರಿಗೆ ಆದಾಯವು ನಷ್ಟವಾದ್ದರಿಂದ ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಯಲು ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ‘ಪೂರ್ವ ಪ್ಯಾಕೇಜ್ ಮತ್ತು ಲೇಬಲ್’ ಮಾಡಿರುವ ಆಹಾರ ಧಾನ್ಯಗಳಿಗೆ ಬ್ರ್ಯಾಂಡ್ ಹೆಸರು ಇಲ್ಲದಿದ್ದರೂ ಸಹ ಶೇಕಡ 5ರ ಜಿ.ಎಸ್.ಟಿ. ತೆರಿಗೆಯನ್ನು ವಿಧಿಸಲು ನಿರ್ಧರಿಸಲಾಯಿತು.
ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಈ ಕೆಳಕಂಡ ಷರತ್ತುಗಳನ್ನು ಪೂರೈಸಿರುವ ಆಹಾರಧಾನ್ಯಗಳಿಗೆ ಮಾತ್ರ ಶೇಕಡ 5ರ ಜಿ.ಎಸ್.ಟಿ. ತೆರಿಗೆಯನ್ನು ವಿಧಿಸಲು ನಿರ್ಧರಿಸಲಾಯಿತು. ಆಹಾರ ಧಾನ್ಯಗಳು ಪೂರ್ವ ಪ್ಯಾಕೇಜ್ ಆಗಿರತಕ್ಕದ್ದು, ಆಹಾರ ಧಾನ್ಯಗಳಿಗೆ ಲೇಬಲ್ ಆಗಿರತಕ್ಕದ್ದು, 25 ಕೆ.ಜಿ. ಅಥವಾ ಕಡಿಮೆ ತೂಕದ್ದಾಗಿರತಕ್ಕದ್ದು.
ಸಿ.ಬಿ.ಐ.ಸಿ. ರವರು ದಿನಾಂಕ: 17-07-2022ರ ಎಫ್ಎಕ್ಯೂ ನಲ್ಲಿ ‘ಪೂರ್ವ ಪ್ಯಾಕೇಜ್ ಮತ್ತು ಲೇಬಲ್’ ಮಾಡಿರುವ ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ನಿದರ್ಶನಗಳೊಂದಿಗೆ ಸ್ಪಷ್ಟೀಕರಣವನ್ನು ನೀಡಿರುತ್ತಾರೆ.
ಆಹಾರ ಧಾನ್ಯಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡಿದಲ್ಲಿ ತೆರಿಗೆ ವಿನಾಯಿತಿಯು ಮುಂದುವರೆಯುತ್ತದೆ. 25 ಕೆ.ಜಿ / 25 ಲೀಟರ್ಗಳಿಗಿಂತ ಹೆಚ್ಚಿರುವಆಹಾರ ಧಾನ್ಯಗಳು, ಬೇಳೆಕಾಳುಗಳು ಮತ್ತು ಹಿಟ್ಟುಗಳು ಪೂರ್ವ ಪ್ಯಾಕೇಜ್ ಮತ್ತು ಲೇಬಲ್ ಮಾಡಿರುವ ಸರಕಿನಡಿಯಲ್ಲಿ ಬರುವುದಿಲ್ಲವಾದ್ದರಿಂದ, ಈ ಸರಕುಗಳು ಜಿ.ಎಸ್.ಟಿ. ತೆರಿಗೆಗೆ ಒಳಪಡುವುದಿಲ್ಲ. ಸಾಂಸ್ಥಿಕ ಮತ್ತು ಕೈಗಾರಿಕೆಗಳಿಗೆ ಸರಬರಾಜು ಮಾಡುವಆಹಾರ ಧಾನ್ಯಗಳು ಜಿ.ಎಸ್.ಟಿ. ತೆರಿಗೆಗೆ ಒಳಪಡುವುದಿಲ್ಲ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು (ಕರ್ನಾಟಕ) ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.