ಕಲೆ ಸಂಸ್ಕೃತಿ ಉಳಿಸಲು ಪ್ರತಿಭೆಗಳಿಗೆ ವೇದಿಕೆ ಕೊಡಿ: ಮಲ್ಲಿಕಾರ್ಜುನ ಸೇಡಂ

0
9

ವಾಡಿ: ಭಾರತ ಬಹು ಸಂಸ್ಕೃತಿಯ ಕಲೆಯನ್ನು ಒಳಗೊಂಡ ದೇಶ. ಇಲ್ಲಿ ಪ್ರತಿಯೊಂದು ರಾಜ್ಯ ಹಾಗೂ ಪ್ರತಿಯೊಂದು ಸಮುದಾಯ ಪ್ರತ್ಯೇಕ ಸಾಂಸ್ಕೃತಿಕ ಕಲೆಯ ಇತಿಹಾಸದ ಹಿನ್ನೆಲೆ ಹೊಂದಿದೆ. ಅದನ್ನು ಉಳಿಸಿ ಬೆಳೆಸಬೇಕು ಎನ್ನುವುದಾದರೆ ಪ್ರತಿಭೆಯುಳ್ಳ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಬೇಕು ಎಂಬುದನ್ನು ಶಿಕ್ಷಕರು ಮರೆಯಬಾರದು ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ ಹೇಳಿದರು.

ಶನಿವಾರ ಪಟ್ಟಣದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗೆ ಬರುವ ಪ್ರತಿಯೊಂದು ಮಗು ತನ್ನ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆಯ ಪ್ರಭಾವ ಹೊಂದಿರುತ್ತದೆ. ಆ ಮಗುವಿನ ಮೂಲಕ ಜನಪದ ಕಲೆಗಳನ್ನು ಜೀವಂತವಾಗಿಡಲು ಶಿಕ್ಷಣ ಇಲಾಖೆ ಪ್ರತಿಭಾಕಾರಂಜಿ ಕಾರ್ಯಕ್ರಮ ಜಾರಿಗೆ ತಂದಿದೆ. ಹಬ್ಬ ಮತ್ತು ಜಾತ್ರೆಗಳ ಆಚರಣೆಯಲ್ಲಿ ಧಾರ್ಮಿಕವಾದದ ನೆಲೆಯಲ್ಲೇ ಸಾಂಸ್ಕೃತಿಕ ಕಲೆಯನ್ನೊಳಗೊಂಡಿರುವುದನ್ನು ನಾವು ಕಾಣುತ್ತೇವೆ. ಇಂಥಹ ಕಲೆಗಳನ್ನು ಪೋಷಿಸುತ್ತಿರುವ ಕಲಾ ಪ್ರತಿಭೆಗಳಿಗೆ ವೇದಿಕೆ ಸಿಗದ ಕಾರಣ ಅವು ಸಮಾಜದಿಂದ ಕಣ್ಮರೆಯಾಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡಿ, ತರಗತಿಯಲ್ಲಿ ಪಾಠ ಮಾಡಿ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವಂತೆ, ಈ ಪ್ರತಿಭಾ ಕಾರಂಜಿ ಕ್ಲಾಸಿನಲ್ಲಿ ಮಕ್ಕಳೊಳಗೆ ಅಡಗಿರುವ ಕಲಾ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯ ಮಾಡಬೇಕಿದೆ. ನ್ಯಾಯಸಮ್ಮತವಾದ ಸ್ಪರ್ಧೆ ಮತ್ತು ಆತ್ಮಸಾಕ್ಷಿಯ ತೀರ್ಪುಕೊಟ್ಟು ನೈಜವಾದ ಕಲಾವಿದರನ್ನು ಗುರುತಿಸುವ ಜವಾಬ್ದಾರಿ ತೀರ್ಪುಗಾರರ ಮೇಲಿದೆ. ಇದೊಂದು ಸರ್ಕಾರದ ಯೋಜನೆಯಂತೆ ಕಂಡು ಆದೇಶ ಪಾಲಿಸುವ ಬದಲು ಪ್ರಾಮಾಣಿಕವಾಗಿ ಮಗುವಿನ ಪ್ರತಿಭೆಗೆ ಕನ್ನಡಿ ಹಿಡಿದು ಪ್ರೋತ್ಸಾಹಿಸಬೇಕು ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿದರು. ಮುಖ್ಯಶಿಕ್ಷಕಿ ಸಿಸ್ಟರ್ ಗ್ರೇಸಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಸೂರ್ಯಕಾಂತ ದಿಗ್ಗಾಂವ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಇಸಿಒ ಸಂತೋಷ ಸಿರನಾಳ, ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಅಬ್ದುಲ್ ಸಲಿಂ ಪ್ಯಾರೆ, ಹುಸೇನ ಪಾಶಾ, ಚಂದ್ರಕಾಂತ ಚವ್ಹಾಣ, ಭಗವಾನ ದಂಡಗುಲಕರ, ಸೋಮಯ್ಯ ಹಿರೇಮಠ, ರೇಣುಕಾ ಕೆರಿತಾಂಡಾ, ಡಾನ್‌ಬಾಸ್ಕೊ, ಜಯಾರಾಣಿ ವಸಂತಾ ಅತಿಥಿಗಳಾಗಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಲೆ, ನೃತ್ಯ, ರಂಗೋಲಿ, ಭಾಷಣ, ಕ್ಲೇ ಮಾಡಲಿಂಗ್, ಹಾಡು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮೆರೆದರು. ಶಿಕ್ಷಕಿ ಕಾಸಿಂಬಿ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here