ಕಾಳಗಿ: ಸುಕ್ಷೇತ್ರ ದಕ್ಷಿಣಕಾಶಿ ಎಂಬ ನಾಮಕ್ಕೆ ಹೆಸರಾಗಿರುವ ಕಾಳಗಿ ಪಟ್ಟಣದಲ್ಲಿ ಹಲವಾರು ವರ್ಷಗಳಿಂದಲೂ ಹಾಳು ಬಿದ್ದಿರುವ ಶ್ರೀ ಹಿರೊಡೇಶ್ವರ ದೇವಸ್ಥಾನವನ್ನು ಪಟ್ಟಣದ ನಾಗರಿಕರ ಸಹಕಾರದಿಂದ ನವಿಕರಣಗೊಂಡು ಸಜ್ಜಾಗಿ ನಿಂತಿರುವ ದೇವಸ್ಥಾನದ ಲೋಕಾರ್ಪಣೆಯೂ ಇದೇ ತಿಂಗಳ ಅಗಷ್ಟ್ ೩೧ ರಂದು ಜರುಗಲಿದೆ ಎಂದು ದೇವಸ್ಥಾನದ ಸದ್ಭಕ್ತರು ಶನಿವಾರ ದೇವಸ್ಥಾನದಲ್ಲಿ ನಡೆಸಿರುವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೂತನವಾಗಿ ನವಿಕರಣಗೊಂಡಿರುವ ದೇವಸ್ಥಾನದ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ ಪಟ್ಟಣದ ತಾಯಿ ಬನಶಂಕರಿದೇವಿ ದೇವಸ್ಥಾನದ ಆವರನದಲ್ಲಿರುವ ಕಲ್ಯಾಣ ಮಂಟಪದಲ್ಲಿ ೩೧ ಅಗಷ್ಟ್-೨೦೨೨ ರಿಂದ ೧೦ ಸೆಪ್ಟೆಂಬರ್-೨೦೨೨ರ ವರೆಗೆ ಪ್ರತಿನಿತ್ಯ ಸಂಜೆ ೭-೩೦ ರಿಂದ ೧೦-೩೦ರ ವರೆಗೆ ಪಂಡಿತ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ವೇದ ಮೂರ್ತಿ ಸದಾನಂದ ಶಾಸ್ತ್ರೀಗಳು ಸಂಸ್ಥಾನ ಹರ್ತಿಮಠ ಗದಗ ಅವರಿಂದ ಶ್ರೀ ನವಲಗುಂದ ನಾಗಲಿಂಗೇಶ್ವರ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿನಿತ್ಯವೂ ವಿವಿಧ ರಾಜಕೀಯ ಗಣ್ಯ ಮಾನ್ಯರು, ಹಾರಕೂಡ ಶ್ರೀಗಳು ಸೇರಿದಂತೆ ಸಾಧು-ಸಂತರ ಸಂಗಮವೇ ಆಗಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗಯ್ಯಸ್ವಾಮಿ ಚಿಕ್ಕಮಠ ಕಾಳಗಿ ಅವರು ತಿಳಿಸಿದ್ದಾರೆ.
ಪ್ರತಿನಿತ್ಯ ನಡೆಯುವ ಪುರಾಣ ಕಾರ್ಯಕ್ರಮದಲ್ಲಿ ನಿತ್ಯ ಅನ್ನ ದಾಸೋಹ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಸ್ಕಾರಯುತ ಪ್ರವಚನಗಳೂ ಕೂಡ ಜರುಗಲಿರುವುದರಿಂದ ಈ ಭಕ್ತಿಪೂರ್ವಕವಾಗಿರುವ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡು ಹಿರೊಡೇಶ್ವರ ಸ್ವಾಮಿಯ ಕೃಪಾಶಿರ್ವಾದಕ್ಕೆ ಪಾತ್ರರಾಗಿ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ದೇವಸ್ಥಾನದ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ನಾಗಯ್ಯಸ್ವಾಮಿ ಚಿಕ್ಕಮಠ, ಪ್ರಮುಖರಾದ ಶಿವುಕುಮಾರ ಪಡಶೇಟ್ಟಿ, ರೇವಣಸಿದ್ದ ಕುಡ್ಡಳ್ಳಿ, ಶರಣು ಮುಕರಂಬಿ, ರವಿ ಬಿರಾದಾರ, ಚಂದ್ರಕಾಂತ ಕಮಲಾಪೂರ, ಜಗನ್ನಾಥ ಚಂದನಕೇರಿ, ಶರಣು ಬಿರಾದಾರ, ಶಿವಶರಣಪ್ಪ ಮೇಳಕುಂದಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.