ಸುರಪುರ:ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ರೈತರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ಇಂದು ರೈತರು ತೀವ್ರ ಸಂಕಷ್ಟದಲ್ಲಿದ್ದೇವೆ ಆದರೆ ಆಳುವ ಸರಕಾರಗಳು ರೈತರ ಬಗ್ಗೆ ಕಾಳಜಿಯಿಲ್ಲ,ರೈತರ ಸಮಸ್ಯೆಗಳನ್ನು ಮರೆತು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಲು ಸಚಿವರು ಬಿಜಿಯಾಗಿದ್ದಾರೆ.ಇನ್ನು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ನಮ್ಮ ಜಿಲ್ಲೆಯ ಸುರಪುರ ಯಾದಗಿರಿಯಲ್ಲಿ ಬಿಜೆಪಿ ಶಾಸಕರಿದ್ದರು ಇಲ್ಲಿಯವರಿಗಾಗಲಿ ಪಕ್ಕದ ದೇವದುರ್ಗ ಶಾಸಕರಿಗಾಗಲಿ ಮಂತ್ರಿಸ್ಥಾನ ನೀಡಿ ಜಿಲ್ಲಾ ಉಸ್ತುವಾರಿಗಳಾಗಿಸುವುದಿಲ್ಲ.ಆದರೆ ದೂರದ ಬೀದರ ದಿಂದ ಉಸ್ತುವಾರಿ ಸಚಿವರು ಬರುವುದು ಯಾವಾಗ,ಜನರಿಗೆ ಸಿಗುವುದು ಯಾವಾಗ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೆಟ್ಟಗೆ ಕನ್ನಡ ಮಾತನಾಡಲು ಬರುವುದಿಲ್ಲ,ಅಂತವವು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ನಮ್ಮ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಶರಣು ಮಂದರವಾಡ ಮಾತನಾಡಿ,ಜಿಲ್ಲೆಯಾದ್ಯಂತ ನಿರಂತರ ಮಳೆಯಿಂದ ಹಾಳಾಗಿರುವ ರೈತರ ಬೆಳೆಗಳಿಗೆ ಕೂಡಲೇ ಪರಿಹಾರ ನೀಡಬೇಕು,ಮಳೆಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು,ಮಳೆಯಿಂದ ಬಿದ್ದ ಮನೆಗಳನ್ನು ನಿರ್ಮಿಸಿಕೊಡಬೇಕು,ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು,ಮಳೆಯಿಂದ ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದ್ದು ಆರೋಗ್ಯ ಇಲಾಖೆ ಎಲ್ಲರಿಗು ಸರಿಯಾದ ಚಿಕಿತ್ಸೆ ದೊರೆಯಲು ಕ್ರಮವಹಿಸಬೇಕು,ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸರಕಾರ ನೀಡಿರುವ ಯೋಜನೆಗಳನ್ನು ತಲುಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಸ್ಥಳಿಯರನ್ನು ನೇಮಿಸುವಂತೆ ಒತ್ತಾಯಿಸಿದರು.
ಇದಕ್ಕು ಮುನ್ನ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರನ್ನು ಕಡೆಗಣಿಸಿವೆ ಎಂದು ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಣ್ಣ ಕುಂಬಾರಪೇಟೆ,ಮಲ್ಕಣ್ಣ ಚಿಂತಿ, ಮಲ್ಲಣ್ಣ ಹುಬ್ಬಳ್ಳಿ ಕುಂಬಾರಪೇಟೆ,ಅಮರನಾಥ ಹೈಯ್ಯಾಳ,ಹಣಮಂತ್ರಾಯ ರುಕ್ಮಾಪುರ,ಚನ್ನಪ್ಪ ನರಸಿಂಗಪೇಟೆ,ರವಿ ಕುಂಬಾರ ಕುಂಬಾರಪೇಟೆ,ಭೀಮರಾಯ ಕುಂಬಾರ ಕುಂಬಾರಪೇಟೆ,ಮುದ್ದಣ್ಣ ಅಮ್ಮಾಪುರ, ಶಾಂತಪ್ಪ ಕುಂಬಾರ,ಗೋವಿಂದಪ್ಪ ಕವಲಿ,ಹೈಯ್ಯಾಳಪ್ಪ ಮಂದಿಗ್ಯಾನಿ,ಜುಮ್ಮಣ್ಣ ಕೆಂಗುರಿ,ಮಲ್ಲಪ್ಪ ಏಳುರೊಟ್ಟಿ,ಪ್ರಕಾಶ ಪಗಡೆಕಲ್,ಸಿದ್ರಾಮರಡ್ಡಿ ಪಾಟೀಲ ಬೀರನೂರ ಸೇರಿದಂತೆ ಅನೇಕರಿದ್ದರು.