ಕಲಬುರಗಿ: ನವೆಂಬರ್ 30ರಂದು ಕಲಬುರಗಿಯಲ್ಲಿ ನಡೆಯಲಿರುವ ಬಿಜೆಪಿ ಪಕ್ಷದ ರಾಜ್ಯ ಹಿಂದುಳಿದ ವರ್ಗದ ಸಮಾವೇಶಕ್ಕೆ ಕಲಬುರಗಿ ಸಜ್ಜುಗೊಂಡಿದೆ.
ನಗರದ ಹೊರ ವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಬಳಿ ಇರುವ ರದ್ದೇವಾಡಗಿ ಲೇಔಟ್ನ ವಿಶಾಲವಾದ ಜಾಗದಲ್ಲಿ ಈ ಸಮಾವೇಶ ಆಯೋಜಿಸಲಾಗಿದ್ದು, ದೀಪಾವಳಿ ಹಬ್ಬಕ್ಕಿಂತ ಮುಂಚಿನಿಂದ ಸಮಾವೇಶಕ್ಕೆ ಅಗತ್ಯವಿರುವ ಶಾಮಿಯಾನ ಹಾಕುವ, ಪೆಂಡಾಲ ಹೊಡೆಯುವ ಕಾರ್ಯ ಭರದಿಂದ ಸಾಗಿದೆ. ಸಮಾವೇಶದ ಸಿದ್ಧತೆಗಾಗಿ ಬಿಜೆಪಿಯ ರಾಜ್ಯ ನಾಯಕರಾದ ಎನ್. ರವಿಕುಮಾರ ಹಾಗೂ ಜಿಲ್ಲೆಯ ಶಾಸಕರು, ಪಕ್ಷದ ಮುಖಂಡರು ಕಳೆದ ನಾಲ್ಕೈದು ದಿನಗಳಿಂದ ಓಡಾಡುತ್ತಿದ್ದಾರೆ.
ದೀಪಾವಳಿ ಬಲಿಪಾಡ್ಯದ ದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮರುಗೇಶ ನಿರಾಣಿ ವಿಮಾನದ ಮೂಲಕ ಇಲ್ಲಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಸಮಾವೇಶ ಅಚ್ಚು ಕಟ್ಟಾಗಿ ನೆರವೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಮುಖಂಡರಿಗೆ ಸೂಚಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಮಾಧ್ಯಮ ವಕ್ತಾರರಾದ ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ನಿತಿನ್ ಗುತ್ತೇದಾರ, ಸಂಗಣ್ಣ ಇಜೇರಿ ಮತ್ತಿತರರು ಇದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಸುಮಾರು ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಮಧ್ಯಪ್ರದೇಶ ಸಿಎಂ. ಶಿವರಾಜ ಸಿಂಗ್ ಚಹ್ವಾಣ, ಓಬಿಸಿ ಸೆಲ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಲಕ್ಷ್ಮಣ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ, ಭಗವಂತ ಖೂಬಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ. ಯಡಿಯೂರಪ್ಪ ಮತ್ತಿತರgಪ್ಪೀ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.
ರಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಪಕ್ಷದ ಕಾರ್ಯಕರ್ತರಿಗಾಗಿ ಆಸನದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಊಟಕ್ಕಾಗಿ ಹುಗ್ಗಿ ಪಲಾವ್, ಮಜ್ಜಿಗೆ, ಮೊಸರನ್ನ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನಪರ ಸಾಧನೆಗಳು, ಸರ್ಕಾರದ ಸೌಲತ್ತುಗಳು ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿವರಿಸಿದರು.