ಕಲಬುರಗಿ: ವೈಯಕ್ತಿಕ ಲಾಭಕ್ಕಾಗಿ ಬಂಜಾರಾ ಸಮಾಜದ ಹೆಸರು ಬಳಸಿಕೊಂಡು ಶಾಸಕ ಪ್ರೀಯಾಂಕ್ ಖರ್ಗೆ ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರಾದ ಅರವಿಂದ ಚವ್ಹಾಣ್ ಹಾಗೂ ಮಣಿಕಂಠ ರಾಠೋಡ ಅವರು ಬಂಜಾರಾ ಸಮಾಜಕ್ಕೆ ನೀಡಿದ ಕೊಡುಗೆ ಏನು ಎಂದು ಕಾಂಗ್ರೆಸ್ ಮುಖಂಡ ಡಾ.ರವಿ ಚವ್ಹಾಣ ಪ್ರಶ್ನಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಂಜಾರ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಚಿವರಾಗಿದ್ದಾಗ ನೂರಾರು ಕೋಟಿ ರೂಪಾಯಿ ಬಂಜಾರ ಸಮಾಜದ ಕಲ್ಯಾಣಕ್ಕಾಗಿ ಕೊಡುಗೆ ನೀಡಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಂಜಾರ ಸಮಾಜವು ಬಿಜೆಪಿ ಮುಖಂಡರು ಹಾಗೂ ಸರ್ಕಾರದ ಬಗ್ಗೆ ಸಿಡಿದೆದ್ದಿದೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಹಾಗೂ ಕೊಡುಗೆಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಕಡೆ ವಾಲುತ್ತಿದೆ. ಕಾಂಗ್ರೆಸ್ ಪಕ್ಷವು ಕೂಡ ಬಂಜಾರ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಬಂಜಾರ ಸಮಾಜದ ಕೆಲ ಪುಡಿ ರಾಜಕೀಯ ಮುಖಂಡರುಗಳು ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.
ಮಣಿಕಂಠ ರಾಠೋಡ ಈಗಾಗಲೇ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅರವಿಂದ್ ಚವ್ಹಾಣ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ಬಹಳಷ್ಟು ಹಗರಣ ಮಾಡಿದ್ದಾರೆ ಎಂದು ರವಿ ಚವ್ಹಾಣ್ ಆರೋಪಿಸಿದ್ದಾರೆ.
ಮಣಿಕಂಠ ರಾಠೋಡ ಮತ್ತು ಅರವಿಂದ ಚವ್ಹಾಣ್ ತಾವೊಬ್ಬ ಬಂಜಾರ ಸಮಾಜದ ಮುಖಂಡರಂತೆ ವರ್ತಿಸುವುತ್ತಿರುವುದು ಖಂಡನೀಯ ವಿಷಯವಾಗಿದೆ. ಚಿತ್ತಾಪುರ ಮಾತ್ರವಲ್ಲದೆ ಇಡೀ ಕರ್ನಾಟಕದಲ್ಲೇ ಪ್ರಿಯಾಂಕ್ ಖರ್ಗೆ ಅವರು ಬಬ್ಬ ಜಾತ್ಯತೀತ ಹಾಗೂ ಅಭಿವೃದ್ಧಿ ಪರ ಚಿಂತನಯುಳ್ಳ ನಾಯಕ ಎಂಬುವುದನ್ನು ಬಂಜಾರ ಸಮಾಜ ಸಂಪೂರ್ಣ ಒಪ್ಪಿಕೊಂಡಿದೆ ಎಂದು ಚವ್ಹಾಣ್ ತಿಳಿಸಿದ್ದಾರೆ.