- 142 ನೇ ದಿನಕ್ಕೆ ಕಾಲಿಟ್ಟ ಕಾರಂಜಾ ಸಂತ್ರಸ್ತರ ಧರಣಿ
- ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಬೆಂಬಲ
ಬೀದರ್: ಜಿಲ್ಲೆಯ ಜೀವನಾಡಿ, ಜಿಲ್ಲೆಯ ಏಕೈಕ ಜಲಾಶಯವಾದ ಕಾರಂಜಾ ಉಳಿಸಿ, ರೈತರನ್ನು ರಕ್ಷಿಸಿ. ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು, ಸಂಘ- ಸಂಸ್ಥೆಗಳು, ಮಠಾದೀಶರುಗಳೂ ಸೇರಿ, 142 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ನೀಡಿ ಎಂದು ಕಲ್ಯಾಣ-ಕರ್ನಾಟಕ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಕರೆ ನೀಡಿದರು.
ಕಾರಂಜಾ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ದಸ್ತಿಯವರು ಮುಂದುವರೆದು ಮಾತನಾಡಿ, ಈ ಹೊರಾಟವು ಯಾವುದೇ ಸರಕಾರದ ವಿರುದ್ಧ, ರಾಜಕೀಯ ಪಕ್ಷಗಳ ಅಥವಾ ವ್ಯಕ್ತಿಗಳ ವಿರುದ್ಧವಲ್ಲ. ಜಲಾಶಯಕ್ಕೆ ಜಮೀನು ನೀಡಿರುವುದರ ವೈಜ್ಞಾನಿಕ ಪರಿಹಾರ ಕೇಳುವುದಕ್ಕಾಗಿ ನಡೆಸುತ್ತಿರುವ ಹೋರಾಟ ಇದಾಗಿದ್ದು, ಜಾತಿ-ಮತ-ಪಂಥ, ರಾಜಕೀಯ ರಹಿತವಾಗಿ ಮುಗ್ಧ ರೈತರು ನಡೆಸುತ್ತಿರುವ ಈ ಹೋರಾಟವನ್ನು ಎಲ್ಲರೂ ಮಾನವೀಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ಮತ್ತು ಕನ್ನಡ ಭೋಮಿ ಜಾಗ್ರತಿ ಸಮಿತಿಯ ರಾಜ್ಯಾಧ್ಯಕ್ಷರಾದ ಲಿಂಗರಾಜ ಸಿರಗಾಪೂರ್, ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷರಾದ ಡಾ. ಎ. ಎಸ್. ಭದ್ರಶೆಟ್ಟಿ,, ಕಕಹೋ ಸಮಿತಿಯ ಬೀದರ ಜಿಲ್ಲಾಧ್ಯಕ್ಷ ಅನಂತ ರೆಡ್ಡಿ ನರಸಾನೋರ ಇದ್ದರು. ನಿರ್ದೇಶಕ ವೀರಭದ್ರಪ್ಪ ಉಪ್ಪಿನ್, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿಯವರು ಮಾತನಾಡಿದರು.
ಈ ಹಿಂದಿನ ಸದನದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಗಳು ನೀಡಿರುವಆಶ್ವಾಸನೆಯನ್ನು ಕಾರ್ಯರೂಪಕ್ಕೆ ತರದೇ ಇರುವು ದಕ್ಕೆ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹೊಚಕ ನಳ್ಳಿಯವರು ಆಕ್ರೋಶ ವ್ಯಕ್ತಪಡಿಸಿ ದರು.ಬಹಳ ದಿವಸಗಳಿಂದ ನನೆಗುದಿಗೆ ಬಿದ್ದ ಕಾರಂಜಾ ಸಂತ್ರಸ್ತರಿಗೆ ಪರಿಹಾರ ನೀಡಲು ವಿಳಂಬ ಮಾಡಿದರೆ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಸಂತೋಷ ಚೆಟ್ಟಿ, ಉದಯ ಕುಮಾರ ಮರಕಲ್, ಕಲ್ಯಾಣ ರಾವ ಚನಶೆಟ್ಟಿ, ರಾಜಪ್ಪ ಕೋಸಮ್, ಬೀಮರೆಡ್ಡಿ, ಸುಭಾಷ್ ಪಾಟೀಲ, ರಾಜಶೇಖರ ಬಿರಾದಾರ್, ಮಲ್ಲು, ಶಿವಕುಮಾರ್, ಶಂಕ್ರಪ್ಪ, ಸೈಯದ್ ಅಲಿ, ಲಕ್ಷ್ಮಿ ಖೌದೆ, ಶಬ್ಬೀರಮಿಯಾ, ವೀರೇಂದ್ರ, ಮೋಹನರಾವ, ಬಸವರಾಜ ಅಣ್ಣೆಪ್ಪ, ಸುಂದರ್ ರಾವ್, ಮಾರುತಿ ಪಂಚಾಳ್ , ಶ್ರೀನಿವಾಸ, ರಾಜಶೇಖರ ಬಿರಾದಾರ್, ವಿಜಯಕುಮಾರ್ ಕುಲಕರ್ಣಿ, ಮಾದಪ್ಪ, ಮುಂತಾದವರು ಹಾಜರಿದ್ದರು.