ಜೇವರ್ಗಿ: ಇದೆ 6ರಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ, ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮಕ್ಕೆ ಜೇವರ್ಗಿಯಿಂದ ಸುಮಾರು 500ಜನ ಬೆಂಗಳೂರಿಗೆ ತೆರಳುತ್ತಿದ್ದೆವೆ ಎಂದು ದಲಿತ ಮುಖಂಡರು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ದಲಿತ ಸಂಘಟನೆಗಳ ಮುಖಂಡರು, ಇದೆ 6 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮಕ್ಕೆ ಸುಮಾರು 12 ದಲಿತ ಸಂಘಟನೆಗಳು ಒಗ್ಗಟ್ಟಿನಿಂದ ನಡೆಯುವ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ರಾಜ್ಯ ಮಟ್ಟದ ಕರೆಗೆ ಓ ಗೊಟ್ಟು ಜೇವರ್ಗಿಯಿಂದ ನಾವುಗಳು ಸಹ ಭಾಗಿಯಾಗುತ್ತಿದ್ದೆವೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಮುಖಂಡರು, ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ. ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ನಾಶ ಮಾಡುತ್ತಿರುವ ಆರ್ ಎಸ್ ಎಸ್ ಬಿಜೆಪಿಯ ದುರಾಡಳಿತದ ವಿರುದ್ಧ ಉಗ್ರವಾಗಿ ಖಂಡಿಸುತ್ತೆವೆ. ಇದೆ ಮಂಗಳವಾರದಂದು ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗುವುದರಿಂದ ಬೆಂಗಳೂರು ಸಂಪೂರ್ಣವಾಗಿ ನೀಲಿಮಯ ಆದರೂ ಅಚ್ಚರಿಯಿಲ್ಲ. ಅದರ ಮೂಲಕ ಕೊಮುವಾದಿ ಸರ್ಕಾರಗಳ ವಿರುದ್ಧ ದಲಿತರು ಘರ್ಜಿಸಲಿದ್ದಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುವರ್ಣ ವ್ಯವಸ್ಥೆಯನ್ನು ಮರು ಸ್ಥಾಪನೆ ಮಾಡುವುದು ಆರ್ ಆಸ್ಎಸ್ ಮತ್ತು ಬಿಜೆಪಿಯ ಅಜೆಂಡಾವಾಗಿದೆ. ಹಿಂದುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರರನ್ನು ಶತೃಗಳಂತೆ ಬಿಂಬಿಸುತ್ತಿದ್ದಾರೆ. ಪಾಕಿಸ್ತಾನ, ಕಾಶ್ಮೀರ, ಮಂದಿರ, ಮಸೀದಿ, ಗೋ ರಕ್ಷಣೆ, ಹೀಗೆ ಮುಂತಾದ ಹೆಸರುಗಳಲ್ಲಿ ಜನರ ಭಾವನೆಗಳ ಜೊತೆ ಚೆಲ್ಲಾಟವನ್ನು ಬಿಜೆಪಿ ಮಾಡುತ್ತಿದೆ. ಅದರ ದುರ್ಲಾಭವನ್ನು ಪಡೆಯುವ ತಂತ್ರಗಾರಿಕೆ ಮುಂದುವರೆದಿದೆ ಎಂದು ದಲಿತ ಮುಖಂಡರು ಕೆಂಡ ಕಾರಿದರು. ಸತ್ಯ ಹಾಗೂ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳು ಭಾಜಪ ಕಟಾಕ್ಷದ ಕೋಟ್ಯಾಧೀಶರ ಕೈವಶವಾಗಿದೆ ಎಂದು ಮಾಧ್ಯಮಗಳ ವಿರುದ್ಧ ಸಹ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರುಗಳಾದ ದವಲಪ್ಪ ಮದನ, ಸಿದ್ರಾಮ ಕಟ್ಟಿ, ಶಿವಶರಣ ಮಾರಡಗಿ, ಮಹೇಶ ಕೋಕಿಲೆ, ಶರಣಬಸಪ್ಪ ರೇವನೂರ, ವಿಶ್ವರಾಧ್ಯ ಗಂವ್ಹಾರ, ಶರಣಬಸಪ್ಪ ಲಖಣಾಪೂರ, ಭಾಗಣ್ಣ ಸಿದ್ನಾಳ, ಮರೆಪ್ಪ ಹೊತಿನಮಡು, ಬಸವರಾಜ ಕಟ್ಟಿ ಕೊಳಕೂರ, ಯಶವಂತ ಬಡಿಗೇರ ಮಂದೇವಾಲ, ಭಾಗಣ್ಣ ಕಟ್ಟಿ ಸೇರಿದಂತೆ ಅನೇಕರು ಇದ್ದರು.