ಕಲಬುರಗಿ: ಪ್ರತಿಯೊಬ್ಬ ವ್ಯಕ್ತಿ ಸಂವಿಧಾನದ ಆಶಯದಂತೆ ಉತ್ತಮ ನಡತೆ ಮತ್ತು ವರ್ತನೆಗಳನ್ನು ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿ ಯಶಸಿನತ್ತ ಸಾಗಬೇಕು. ಬದುಕಿನ ಭಾಗವಾಗಿ ಸಂವಿಧಾನ ಓದುವ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ವಿ. ಟಿ. ಕಾಂಬಳೆ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು.
ದೀಪ ಜ್ಞಾನದ ಸಂಕೇತ. ಅದು ತನ್ನ ಸುತ್ತಲ ಪರಿಸರವನ್ನು ಬೆಳಗಿಸುತ್ತದೆ. ಅದರಂತೆ ನಿರಂತರ ಅಧ್ಯಯನ ಮಾಡಿ ನಿಮ್ಮ ನಿಮ್ಮ ಪರಿಸರದಲ್ಲಿ ಪಸರಿಸುವ ಜ್ಞಾನದ ಬೆಳಕು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗ್ರಂಥಾಲಯ ವಿಭಾಗದ ಮುಖ್ಯಸ್ಥ ಪ್ರೊ. ಡಿ. ಬಿ. ಪಾಟಿಲ್ ಅಧ್ಯಕ್ಷತೆವಹಿಸಿ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಂವಿಧಾನ ಬಹುಸಂಸ್ಕೃತಿ ಮತ್ತು ಬಹುಜನರನ್ನು ಪ್ರತಿನಿಧಿಸುವ ಆಶಾಭಾವನೆಯಿರುವ ಮಹಾನ್ ಗ್ರಂಥ. ಅದನ್ನು ಅರಿತು ಸಮಾಜದ ಪ್ರತಿ ಪ್ರತಿ ಮನೆಯಲ್ಲೂ ಸಂವಿಧಾನ ಪೂರ್ವ ಪೀಠಕೆ ಅಳವಡಿಕೆಯಿಂದ ಬಹುಜನರಿಗೆ ಅದರ ಮಹತ್ವ ಮತ್ತು ಮೌಲ್ಯ ತಿಳಿಯುವಂತೆ ಆಗಬೇಕಿದೆ.
ಅದಕ್ಕೆ ಯುವ ಜನಾಂಗ ಮೊದಲ ಪಂಕ್ತಿಯಲ್ಲಿ ನಿಲ್ಲಬೇಕು. ಆಗ ಅಲ್ಲಿನ ಅವಕಾಶ, ಸೌಲಭ್ಯ ಮತ್ತು ಕರ್ತವ್ಯಗಳು ಸಾಮಾನ್ಯರಿಗೂ ಅರಿವಾಗುತ್ತದೆ ಎಂದರು. ವಿಭಾಗದ ವಿದ್ಯಾರ್ಥಿಗಳಾದ ಸಾಹಿಲ್ ಕುಮಾರ್, ಪ್ರೇಮಕುಮಾರ, ಸಾಗರ್ ವಾಡೇಕರ್ ಮಾತನಾಡಿದರು. ಪ್ರಮೋದ್ ಡಾ. ಕೆ. ಎಂ. ಕುಮಾರಸ್ವಾಮಿ ಉಪಸ್ಥಿತರಿದ್ದರು.
ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.