ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ದವನದ ಹುಣ್ಣಿಮೆ ಅಂಗವಾಗಿ ಧಮ್ಮ ವಂದನ ಕಾರ್ಯಕ್ರಮ ನಡೆಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಗೌತಮ್ ಬುದ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ಮೇಣದ ಬತ್ತಿ ಬೆಳಗಿ ಪುಷ್ಪಾರ್ಚನೆ ಮಾಡಿ ನಂತರ ತ್ರಿಸರಣ ಪಂಚಶೀಲ ಪಠಣ ಮಾಡಿ ಧಮ್ಮ ವಂದನೆ ಸಲ್ಲಿಸಲಾಯಿತು.
ನಂತರ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ,ದೇಶದ ಪುರಾತನ ಧರ್ಮಗಳಲ್ಲಿ ಬೌದ್ಧ ಧರ್ಮ ಒಂದು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ,ಇಂತಹ ಧರ್ಮವನ್ನು ಸ್ವೀಕರಿಸಿದ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಧಾರ್ಮಿಕ ಮಾರ್ಗವನ್ನು ತೋರುವ ಮೂಲಕ ಮೌಢ್ಯಾಚರಣೆ,ಕಂದಾಚಾರ ಪಾಲಿಸದೆ ಬೌಧ್ಧ ಧರ್ಮದ ಉಪದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದುನ್ನು ತಿಳಿಸಿದ್ದಾರೆ.ಅದರಂತೆ ನಮ್ಮ ಟ್ರಸ್ಟ್ ಅಧ್ಯಕ್ಷರಾದ ವೆಂಕಟೇಶ ಹೊಸ್ಮನಿಯವರು ತಮ್ಮ ಮನೆಗಳಲ್ಲಿದ್ದ ಎಲ್ಲಾ ದೇವರ ಪಟಗಳನ್ನು ಗೌರವಯುತವಾಗಿ ಕೃಷ್ಣಾ ನದಿಗೆ ಅರ್ಪಿಸುವ ಮೂಲಕ ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ,ಬೌದ್ಧ ಧರ್ಮೀಯರಾದ ನಮಗೆ ಅನ್ಯ ದೇವರ ಪೂಜೆ ಸಲ್ಲದು ಎಂದರು.
ನಂತರ ಕಾರ್ಯಕ್ರಮದಲ್ಲಿ ಭೋಜನ ದಾನ ದಾಸೋಹಿಗಳಾಗಿದ್ದ ಪತ್ರಕರ್ತ ಶ್ರೀಮಂತ ಚಲುವಾದಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ,ರಾಹುಲ್ ಹುಲಿಮನಿ,ರಾಜು ಶಖಾಪುರ,ಶರಣು ಹಸನಾಪುರ,ಸೂಗು ಸಜ್ಜನ್,ಹಣಮಂತ ತೇಲ್ಕರ್,ಸೇರಿದಂತೆ ಅನೇಕ ಜನ ಉಪಾಸಕರು ಉಪಾಸಕಿಯರು ಭಾಗವಹಿಸಿದ್ದರು.