ಲಬುರಗಿ: ಜಿಲ್ಲೆಯಲ್ಲಿ ನೆಟೆರೋಗದಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು ರೈತರು ಸಂಕಷ್ಟು ಎದುರಿಸುತ್ತಿದ್ದಾರೆ. ಹಾಗಾಗಿ ಈ ಕೂಡಲೇ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ನಮ್ಮ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿಯು ಇಲ್ಲಿನ ಜಮೀನುಗಳಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. ಇತ್ತೀಚೆಗೆ ಸುಮಾರು 2 ವರ್ಷಗಳಿಂದ ಅತೀವೃಷ್ಟಿಯಿಂದಾಗಿ ಇಲ್ಲಿನ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿರುತ್ತದೆ. ಅದೇ ರೀತಿ ಪ್ರಸ್ತಕ 2022-23 ಸಾಲಿನಲ್ಲಿ ಸುಮಾರು 4,78,000 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿರುತ್ತದೆ, ಆದರೆ ಈ ವರ್ಷವು ಕೂಡ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸುಮಾರು 1,29,970 ಹೆಕ್ಟೇರ್ ಬೆಳೆಗಳು ಹಾಳಾಗಿರುತ್ತವೆ. ಹಾಗೂ ಇತ್ತೀಚಿನ ದಿನಗಳಲ್ಲಿ ಕಟಾವಿಗೆ ಬರುವ ಹಂತದಲ್ಲಿದ್ದ ತೊಗರಿ ಬೆಳೆಗೆ “ನೆಟೆರೋಗ” ಬಾಧಿಸಿದ್ದು, ಇದರಿಂದ ಅಪಾರ ಪ್ರಮಾಣದ ಬೆಳೆಯು ಹಾನಿಯಾಗಿರುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ದಿನಾಂಕ: 30-11-2022 ರಂದು ಕೃಷಿ ಇಲಾಖೆಯ ಅಧಿಕಾರಿಯವರು ಜಿಲ್ಲೆಯಾದ್ಯಂತ ರೈತರ ಸಮಕ್ಷಮದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ವಾತಾವರಣದ ಏರುಪೇರುಗಳ ಪರಿಣಾಮದಿಂದ ಮೂರು ವಿವಿಧ ಬಗೆಯ ಶೀಲಿಂದ್ರದ ನೆಟೆರೋಗ ಕಂಡು ಬಂದಿದ್ದು ಈ ರೋಗದ ಬಾಧೆಗೆ ತುತ್ತಾದ ಗಿಡಗಳ ಪ್ರಮಾಣವು ಶೇ.25 ರಿಂದ 90 ರಷ್ಟು ಕಂಡು ಬಂದಿರುತ್ತದೆಂದು ಇಲಾಖೆಯವರು ವರದಿ ಸಲ್ಲಿಸಿರುತ್ತಾರೆ.
ಈ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿ ಬೆಳೆಯು ಮಳೆಯ ಅತಿವೃಷ್ಟಿಯಿಂದ ಹಾಗೂ ನೆಟೆರೋಗ ಬಾಧೆಯಿಂದ ಸಂಪೂರ್ಣ ಹಾಳಾಗಿದ್ದು, ಹಿಂದುಳಿದ ಜಿಲ್ಲೆಯಾದ ಕಲಬುರಗಿ ಜಿಲ್ಲೆಯ ರೈತರ ಹಿತ ದೃಷ್ಟಿಯಿಂದ ಸರ್ಕಾರವು ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಅವರು ಬರೆದಿರಿವ ಪತ್ರದಲ್ಲಿ ಕೃಷಿ ಸಚಿವರಿಗೆ ಆಗ್ರಹಿಸಿದ್ದಾರೆ.