ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಅಡಿ ಪಂಚಕೋಟಿ ಹೆಜ್ಜೆಗಳ ವಿರಾಟ ಸಮಾವೇಶ ದಿ.22 ರಂದು ಬೆಳಗಾವಿ ಜಿಲ್ಲೆಯ ಸುವರ್ಣ ಸೌಧದ ಎದುರು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಸುಮಾರು 25 ಸಾವಿರ ಜನ ಸಮಾಜದ ಬಾಂಧವರು ತೆರಳಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ದೀಕ್ಷ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ಶರಣು ಎಂ. ಪಪ್ಪಾ ಹಾಗೂ ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲನಗೌಡ ಎಸ್. ಪಾಟೀಲ್ ಕುಳಗೇರಿ ತಿಳಿಸಿದರು.
ಆಳಂದ, ಅಫಜಲಪುರ ಮತ್ತು ಜೇವರ್ಗಿ ತಾಲೂಕಿನಿಂದ ಹೆಚ್ಚಿನ ಜನ ಸಮಾವೇಶಕ್ಕೆ ತೆರಳಲು ಸಿದ್ಧರಾಗುತ್ತಿದ್ದಾರೆ. ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾವೇಶ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೀಕ್ಷ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಸೇರ್ಪಡೆ ಮಾಡಬೇಕು. ಬೇಡಿಕೆ ಈಡೇರಿಸಿದರೆ ಸನ್ಮಾನ, ಇಲ್ಲಾಂದ್ರೆ ಅವಮಾನ ಎಂಬಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಲ್ಲದೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಎಲ್ಲ ಲಿಂಗಾಯತ ಒಳಪಂಗಡಗಳನ್ನು ಸೇರಿಸುವಂತೆ ಒತ್ತಡ ಹಾಕಲಾಗುವುದು. ಹಾಲಿ ಶಾಸಕರು, ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ರಾಜ್ಯಾಧ್ಯಕ್ಷ ಹಾಗೂ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಮಾಜಿ ಶಾಸಕರು, ಎಲ್ಲ ಚುನಾಯಿತ ಜನಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ ಎಂದು ಮನವಿ ಮಾಡಿದರು. ಪ್ರಮುಖರಾದ ಸಿದ್ದು ಪಾಟೀಲ, ಬಸವರಾಜ, ಗೊಲ್ಲಾಳಪ್ಪ ಮತ್ತಿತರರಿದ್ದರು.