ಕಲಬುರಗಿ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ರಾಜ್ಯದಲ್ಲಿಯೂ ಇಡಬ್ಲ್ಯೂಎಸ್ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್. ಸಚಿದಾನಂದಮೂರ್ತಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯವರ ಕೇಂದ್ರ ಸರ್ಕಾರ ಸಂವಿಧಾನದ 103ನೇ ತಿದ್ದುಪಡಿ ತಂದು ದೇಶದಾದ್ಯಂತ ಇದುವರೆಗೆ ಯಾವುದೇ ಮೀಸಲಾತಿಯ ಸೌಲಭ್ಯ ಹೊಂದದ, ಅಂದರೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರತಿಶತ 10 ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದೆ. ಹಾಗೆಯೇ ದೇಶದ 15ಕ್ಕೂ ಹೆಚ್ಚು ರಾಜ್ಯಗಳು ಇಡಬ್ಲ್ಯೂಎಸ್ ಮೀಸಲಾತಿಯನ್ನು ಜಾರಿಗೆ ತಂದಿವೆ. ಸ್ವಾತಂತ್ರ ಬಂದ ನಂತರ ಬ್ರಾಹ್ಮಣ ಸಮುದಾಯದಲ್ಲಿ ಲಕ್ಷಾಂತರ ಜನರು ಕಡು ಕಷ್ಟವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿಯೂ ತಕ್ಷಣದಿಂದ ಇಡಬ್ಲ್ಯೂಎಸ್ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಕಳೆದ ನ. 23ರಂದು ರಾಜ್ಯಪಾಲರನ್ನು ಹಾಗೂ ನ.24 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಘನತೆವೆತ್ತ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣದಿಂದ ಇಡಬ್ಲ್ಯೂಎಸ್ ಮೀಸಲಾತಿ ಜಾರಿಗೆ ತರುವುದಾಗಿ ತಿಳಿಸಿರುತ್ತಾರೆ. ಹೀಗಾಗಿ ಮೀಸಲಾತಿಯ ಕುರಿತು ಕಳೆದ ಎರಡು ಮೂರು ದಿವಸಗಳಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅನುಲಕ್ಷಿಸಿ, ಕರ್ನಾಟಕದಲ್ಲಿಯೂ ಪ್ರತಿಶತ 10 ರಷ್ಟು ಮೀಸಲಾತಿಯನ್ನು ತಕ್ಷಣದಿಂದ ಜಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಸುಬ್ಬರಾಯ ಎಂ ಹೆಗಡೆ, ಪವನ್ ಕುಮಾರ್, ಜಗನ್ನಾಥ ಕುಲಕರ್ಣಿ, ಶ್ರೀಮತಿ ವತ್ಸಲ ನಾಗೇಶ್, ಜಗದೀಶ ಹುನಗುಂದ ರವರು ಉಪಸ್ಥಿತರಿದ್ದರು.