ಬುದ್ಧ, ಬಸವ, ವಿವೇಕಾನಂದ, ಅಂಬೇಡ್ಕರ್, ಕುವೆಂಪು, ಗಾಂಧಿ ಮುಂತಾದವರು ವೈಜ್ಞಾನಿಕ ಮನೋಧರ್ಮದಿಂದ ಬದುಕುವುದು ಸಾಧ್ಯ ಎಂಬುದನ್ನು ತಮ್ಮ ಬದುಕು ಹಾಗೂ ಬೋಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ. -ಡಾ. ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ, ಬೆಂಗಳೂರು.
ತುಮಕೂರು: ಶಿಕ್ಷಣ ವೈಜ್ಞಾನಿಕ ಮನೋಧರ್ಮ ಬೆಸೆಯುವ ಮಾಧ್ಯಮವಾಗಬೇಕು ಎಂದು ಹಿರಿಯ ಬಂಡಾಯ ಸಾಹಿತಿ ಡಾ. ರಾಮಚಂದ್ರಪ್ಪ ಬರಗೂರ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಾ.ಎಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬುಧವಾರ ಆಯೋಜಿಸಿದ್ದ 2 ದಿನದ ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮೌಢ್ಯ ವಿರೋಧದ ಜೊತೆಗೆ ಅದಕ್ಕೆ ಸಾಕಷ್ಟು ಆಯಾಮಗಳಿವೆ. ವಿಚಾರವಾದ, ನಾಸ್ತಿಕತೆ, ಆಸ್ತಿಕತೆಗೆ ಸಂಬಂಧವಿದೆ. ಮೌಲ್ಯ ಬಿತ್ತುವುದೆ ವೈಜ್ಞಾನಿಕ ಮನೋಧರ್ಮ ಎಂದರು.
ವೈಜ್ಞಾನಿಕ ಮನೋಧರ್ಮ ಅದೊಂದು ಶೋಧ. ಬೌದ್ಧಿಕ ತಪಾಸಣೆ, ಪರಿಶೀಲನೆ ಇವುಗಳು ವೈಜ್ಞಾನಿಕ ಮನೋಧರ್ಮವಾಗಬೇಕು ಎಂದು ತಿಳಿಸಿದರು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಜಸ್ಟಿಸ್ ನಾಗಮೋಹನದಾಸ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಮೂಲಭೂತ ಹಕ್ಕು. ಮೂಢನಂಬಿಕೆ ವಿರೋಧವೂ ಸಂವಿಧಾನದ ಒಂದು ಭಾಗವಾಗಿದ್ದು, ನಂಬಿಕೆ, ಮೂಢನಂಬಿಕೆಗಳ ಬಗ್ಗೆಯೂ ಸಂವಿಧಾನದಲ್ಲಿ ಪ್ರಸ್ತಾಪವಿದ್ದು, ಮೌಢ್ಯ ತೊಲಗಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಕರೆ ನೀಡಿದರು.
ಹೆಣ್ಣು ಮಕ್ಕಳು ಇಂದು ಅತಿ ಹೆಚ್ಚು ಮೌಢ್ಯ, ಕಂದಾಚಾರಕ್ಕೆ ಒಳಗಾಗುತ್ತಿದ್ದಾರೆ. ಬದುಕಿನಲ್ಲಿ ವೈಚಾರಿಕತೆ ಅಳವಡಿಸಿಕೊಂಡಾಗ ಮಾತ್ರ ಸ್ವಾತಂತ್ರ್ಯ, ಸ್ವಾವಲಂಬನೆ ಬೆಳೆಯಲಿದೆ. ನಮ್ಮಲ್ಲಿ ಇಂದು ವಿಜ್ಞಾನ ಬೆಳೆದಿದೆ. ಆದರೆ ವೈಜ್ಞಾನಿಕ ಮನೋಭಾವನೆ ಬೆಳೆದಿಲ್ಲ ಎಂದು ತಿಳಿಸಿದರು.
ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಎ.ಎಸ್. ಕಿರಣಕುಮಾರ ಮಾತನಾಡಿದರು. ತುಮಕೂರು ರಾಮಕೃμÁ್ಣಶ್ರಮದ ವೀರೇಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಿಷತ್ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ ಅಧ್ಯಕ್ಷತೆ ವಹಿಸಿದ್ದರು. ಎಸ್.ನಾಗಣ್ಣ, ಕೆ.ಎಸ್. ದೊರೈರಾಜ, ಕೆ.ಟಿ.ಗಂಗಾಧರ, ಡಾ. ಕೆ.ಜಯರಾಜ್, ಹಂಪಿಕೆರೆ ರಾಜೇಂದ್ರ ವೇದಿಕೆಯಲ್ಲಿದ್ದರು.
ವಿ.ಟಿ.ಸ್ವಾಮಿ ನಿರೂಪಿಸಿದರು. ಡಾ.ಜಿ.ಎಸ್. ಶ್ರೀಧರ ಆಶಯ ಭಾಷಣ ಮಾಡಿದರು. ಡಾ.ಸಿ.ಎನ್. ಮೋಹನಕುಮಾರ ಸ್ವಾಗತಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.