ಶಹಾಬಾದ: ಕುವೆಂಪು ಮೂಲತ: ಕ್ರಾಂತಿ ಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ.ಲೆಖಕರು ಇಲ್ಲವೇ ಇಲ್ಲ ಎನ್ನುವ ಜಿ.ಎಸ್.ಶಿವರುದ್ರಪ್ಪನವರ ಮಾತು ಸತ್ಯವಾದದ್ದು ಎಂದು ಶಿಕ್ಷಕಿ ಭುವನೇಶ್ವರಿ ಎಸ್.ಎಂ ಹೇಳಿದರು.
ಅವರು ಗುರುವಾರ ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನವನ್ನು ಉದ್ದೇಶಿಸಿ ಮಾತನಾಡಿದರು.
ಸಾಹಿತ್ಯದ ಮೂಲಕ ಸಾಮಾಜದ ಮೂಢನಂಜಿಕೆ, ಅನಿಷ್ಟಪದ್ದತಿಗಳು, ಜಾತೀಯತೆ ಯನ್ನು ಪ್ರಭಲವಾಗಿ ವಿರೋಧಿಸಿ ಜಾಗೃತಿ ಮೂಡಿಸಿದರು. ಯುಗದ ಕವಿ, ಜಗದ ಕವಿ ಎಂದು ವರಕವಿ ದ.ರಾ. ಬೇಂದ್ರೆಯವರಿಂದ ಕರೆಸಿಕೊಂಡ ಕುವೆಂಪುರವರ ಎಂಥದ್ದು ಎಂದು ಗೊತ್ತಾಗುತ್ತದೆ. ಪ್ರಕೃತಿಯ ಮಡಿದಲ್ಲಿ ಬೆಳೆದು ಪ್ರಕೃತಿಯನ್ನೆ ತಮ್ಮ ಕಾವ್ಯದ ಜೀವಾಳ ಮಾಡಿಕೊಂದು ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನವನ್ನು ಮಾಡಿದರು. ಆಡು ಮುಟ್ಟದ ಸೊಪ್ಪಿಲ್ಲ. ಕುವೆಂಪು ರಚಿಸದ ಸಾಹಿತ್ಯದ ಪ್ರಕಾರವೇ ಇಲ್ಲ ಎನ್ನುವಂತೆ ಇಪ್ಪತ್ತನೆ ಶತಮಾನದ ದೈತ್ಯ ಪ್ರತಿಭೆ ಎಂದರೆ ಕುವೆಂಪು ಎಂದರೆ ತಪ್ಪಾಗದು.
ಶಿಕ್ಷಕ ಸಿದ್ಧಲಿಂಗ ಬಾಳಿ ಮಾತನಾಡಿ, ಕುವೆಂಪು ಸಾಹಿತ್ಯದ ಕುರಿತು ಹೆಚ್ಚು ಹೆಚ್ಚು ಚರ್ಚೆಗಳಾಗಬೇಕು. ಶಾಲಾ ಕಾಲೇಜು ವಿಧ್ಯಾರ್ಥಿಗಳು, ಯುವಕರು ಹೆಚ್ಚು ಹೆಚ್ಚು ಓದಬೇಕು. ಸಮುದಾಯಕ್ಕೆ ಕುವೆಂಪು ಅವರ ಆಶಯ ಮುಟ್ಟಿಸಬೇಕು. ಆಮೂಲಕ ಸಮ ಸಮಾಜದ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕೆಂದು ಹೇಳಿದರು. ವೇದಿಕೆಯ ಮೇಲೆ ಶಿಕ್ಷಕರಾದ ಶರಣು ಸಜ್ಜನ, ಶರಣು ಖಡೇಕರ, ಜ್ಯೋತಿ ಬಾಳಿ, ಭಾರತಿ ಪರೀಟ ಉಪಸ್ಥಿತರಿದ್ದರು.
ಕುವೆಂಪು ಅವರ ಜೀವನ ಸಾಧನೆಗಳ ಕುರಿತು ಪ್ರಶ್ನೆಗಳಿಗೆ ಮಕ್ಕಳು ತುಂಬಾ ಆಸಕ್ತಿಯಿಂದ ಉತ್ತರವನ್ನು ನೀಡಿ ಬಹುಮಾನ ಗಿಟ್ಟಿಸಿಕೊಂಡರು.
ವಿದ್ಯಾರ್ಥಿನಿ ಸೌಮ್ಯ ನಿರೂಪಿಸಿದಳು, ಸಂಜನಾ ಸ್ವಾಗತಿಸಿದಳು, ಸಚಿನ ಮತ್ತು ಸಾಯಿಕುಮಾರ ಕುವೆಂಪುರವರ ಗೀತೆಗಳನ್ನು ಪ್ರಸ್ತುತಪಡಿಸಿದರು. ವಿಶ್ವನಾಥ ವಂದಿಸಿದನು.