ಕಲಬುರಗಿ: ಬರುವ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾಳಗಿ ತಾಲೂಕಿಗೊಂದು ಸಕ್ಕರೆ ಕಾರ್ಖಾನೆ ಮಂಜೂರು ಮಾಡಬೇಕೆಂದು ಜೆಡಿಎಸ್ ಅಭ್ಯರ್ಥಿ ಸಂಜೀವನ್ ಯಾಕಾಪೂರ್ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ಮನವಿ ಮಾಡಿದರು.
ಕಾಳಗಿ ಪಟ್ಟಣದ ಬಸ್ ನಿಲ್ದಾಣಕ್ಕೆ ಆಗಮಿಸಿದ ಪಂಚರತ್ನ ಯಾತ್ರೆಗೆ ಮತ್ತು ಕುಮಾರ ಸ್ವಾಮಿಯವರಿಗೆ ಅದ್ಧುರಿಯಾಗಿ ಸ್ವಾಗತಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನೆಟೆ ರೋಗಕ್ಕೆ ಬೆಳೆ ನಾಶವಾಗಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಬಿಜೆಪಿ ಶಾಸಕರು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಕಾಟಚಾರಕ್ಕೂ ಭೇಟಿ ನೀಡಲಿಲ್ಲ, ಕಾಳಗಿ ತಾಲೂಕಾ ಕೇಂದ್ರವಾದ ಮೇಲೆ ಸಾಕಷ್ಟು ಅಭಿವೃದ್ಧಿ ಆಗಬೇಕಾಗಿತ್ತು ಆದರೆ ಕಾಳಗಿ ಶೂನ್ಯ ಅಭಿವೃದ್ಧಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಜನರು ವಲಸೆ ಹೋಗುವುದು, ಶಿಕ್ಷಣ, ನಿರುದ್ಯೋಗ, ಆರೋಗ್ಯ, ನಿರಾಶ್ರಿತರ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳಿಗೂ ಹಾಗೂ ರಾಜ್ಯದ ಎಲ್ಲ ಜನ ಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದ ಜನತೆ ಜೆಡಿಎಸ್ ನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರ ಕೊಟ್ಟಿದಲ್ಲಿ ಪಂಚರತ್ನ ಯೋಜನೆ ಜಾರಿಗೆ ತರುವುದರ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸಿ ನೀಡಿದರು.
ಜೆಡಿಎಸ್ ಅಭ್ಯರ್ಥಿ ಸಂಜೀವನ್ ಯಾಕಾಪೂರ್ ಪುತ್ರ ರಾಹುಲ್ ಯಾಕಾಪೂರ್ ಮಾತನಾಡಿ ಶಾಲೆಗೆ ಹೋಗಿ ಆಟ ಆಡಬೇಕಾದವ ನಾನು ರಾಜಕೀಯಕ್ಕೆ ಬರಲು ಕಾರಣ ರೈತರ ಮತ್ತು ಬಡವರ ಸಮಸ್ಯೆ ಅವರ ಸಮಸ್ಯೆಗಳಿಗೆ ಸ್ಪಂದಿಸುವುದೇ ನನ್ನ ಗುರಿಯಾಗಿದೆ.ಅದಕ್ಕಾಗಿ ಕ್ಷೇತ್ರದ ಜನತೆ ನನ್ನ ತಂದೆಯವರನ್ನು ಗೆಲ್ಲಿಸಿ ಚಿಂಚೋಳಿ ಶಾಸಕರಾಗಿ ಮಾಡಬೇಕೆಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ಕಾಳಗಿ ತಾಲೂಕಾ ಜೆಡಿಎಸ್ ಅಧ್ಯಕ್ಷರಾದ ಗೌರಿಶಂಕರ್ ಸೂರವಾರ, ರವಿಶಂಕರ್ ರೆಡ್ಡಿ ಬೀರಪ್ಪ ಪೂಜಾರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.