ಕಲಬುರಗಿ: ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಟ್ಟಣ ವೃತ ಹಾಗೂ ಭೀಮಳ್ಳಿ, ಕೆರಿಬೋಸಗಾ , ಸೈಯದ ಚಿಂಚೋಳಿ, ಪಟ್ಟಣ್ಣ ಮಾರ್ಗದ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಯುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ(ಕೆರಿಬೋಸಗಾ) ಆಗ್ರಹಿಸಿದ್ದಾರೆ.
ಗ್ರಾಮದ ರಸ್ತೆ ಅಗೆದು ತಿಂಗಳಾಗಿವೆ.ರಸ್ತೆ ನಿರ್ಮಾಣಕ್ಕೆಂದು ಹಾಕಲಾದ ಕಂಕರ್ ಗಳು ಚೆಲ್ಲಾಪಿಲ್ಲಿಯಾಗಿವೆ. ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುವ ಲಘು ವಾಹನಗಳಿಗೆ,ಬೈಕ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.ನಿತ್ಯ ಒಂದಿಬ್ಬರಾದ್ದರೂ ರಸ್ತೆಯಲ್ಲಿ ಬಿದ್ದು ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.ಹಗಲಿನಲ್ಲಿ ಹೇಗಾದರೂ ಚಲಿಸಬಹುದು.ಆದರೆ ರಾತ್ರಿ ಹೊತ್ತು ಜೀವ ಕೈಯಲ್ಲಿ ಹಿಡಿದು ಚಲಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಕೇವಲ 15 ಕಿ.ಮೀ.ವರೆಗಿನ ರಸ್ತೆಯಲ್ಲಿ ಜಲ್ಲಿಕಲ್ಲುಗಳ ರಾಶಿ ಹಾಕಿರುವುದರಿಂದ ಪ್ರಯಾಣಿಕರಿಗೆ ಯಾವ ಬದಿಯಿಂದ ಹೋಗಬೇಕೆನ್ನುವುದೇ ಸವಾಲಾಗಿದೆ.ಆದ್ದರಿಂದ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.ವಿಳಂಬ ಧೋರಣೆ ಅನುಸರಿಸಿದರೆ, ಸ್ಥಳೀಯರೊಂದಿಗೆ ಬೀದಿಗಿಳಿದು ಧರಣಿ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು.