-
ಸಂಸದ ಜಾಧವ ಮನೆ ಮುಂದೆ ಪ್ರತಿಭಟನೆ
ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋಮುವಾದೀಕರಣ ಹಾಗೂ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ವಿಶ್ವವಿದ್ಯಾಲಯಗಳ ರಕ್ಷಣಾ ಹೋರಾಟ ಸಮಿತಿ ಸದಸ್ಯರು ಸಂಸದ ಉಮೇಶ ಜಾಧವ ನಿವಾಸದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯದಲ್ಲಿ ಕೋಮುವಾದಿ ಚಟುವಟಿಕೆ ನಡೆಯುತ್ತಿದ್ದರೂ ಹಾಗೂ ವಿಶ್ವವಿದ್ಯಾಲಯದ ಎಸ್ಸಿ ಎಸ್ಟಿ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸುತ್ತಿದ್ದರೂ ಈ ಭಾಗದ ಜನಪ್ರತಿನಿಧಿಯಾಗಿರುವ ಸಂಸದ ಉಮೇಶ್ ಜಾಧವ ಮೌನವಹಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದರು ಮಧ್ಯಪ್ರವೇಶಿಸಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೋಮುವಾದಿ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮೀನಾಕ್ಷಿ ಬಾಳಿ ಮಾತನಾಡಿ, ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವ ಹುದ್ದೆಗಳು ಯಾವುದೊ ಒಂದು ಅಜೆಂಡಾ ಜಾರಿಗೆ ಇರುವ ಸ್ಥಾನಗಳಲ್ಲ. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕುಲಪತಿ, ಕುಲಸಚಿವರೇ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸುತ್ತಿರುವುದು ನಾಚಿಕೆಗೇಡು ವಿಷಯ. ಪೊಲೀಸರು ಕ್ಯಾಂಪಸ್ ಒಳಗೆ ಬರೋಕೆ ಬಿಡಬಾರದು. ಆದರೆ ಕುಲಸಚಿವರೇ ಪೊಲೀಸರು ಕರೆಸಿ ವಿದ್ಯಾರ್ಥಿಗಳ ಮೇಲೆ ಭಯ ಉಂಟು ಮಾಡುತ್ತಿರುವುದು ವಿಪರ್ಯಾಸ ಎಂದರು.
ವಿಶ್ವವಿದ್ಯಾಲಯ ಒಳಗೆ ಈ ವರ್ತನೆ ಖಂಡನೀಯ. ಆರ್ ಎಸ್ ಎಸ್ ಗೂಂಡಾ ಪಡೆಗಳು ಮತಾಂಧತೆ, ಮಾಡುತ್ತಿದ್ದಾರೆ.
ಇದು ಸಾಂಕೇತಿಕ ಹೋರಾಟ. ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯ ಸಂಸದರಾದ ನೀವು ವಿದ್ಯಾರ್ಥಿಗಳ ರೈತರ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಿರಿ ಎಂದು ಆರೋಪಿಸಿದರು. ಇದೆ ವೇಳೆ ಸಂಸದರ ಆಪ್ತ ಸಾಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕೆ.ನೀಲಾ, ಅಶ್ವಿನಿ ಮದನಕರ್, ಮರೆಪ್ಪ ಹಳ್ಳಿ, ಅನಿಲ್ ಮಂಗಾ,ಅಧ್ಯಕ್ಷ ಮಂಡಳಿ ಸದಸ್ಯ ಸೂರ್ಯಕಾಂತ ನಿಂಬಾಳ್ಕರ್, ಸಮಿತಿಯ ಸಂಚಾಲಕರಾದ ಅರ್ಜುನ ಭದ್ರೆ, ಪ್ರಭು ಖಾನಾಪುರೆ, ಡಾ.ಅನಿಲ್ ಟೆಂಗಳಿ, ಸಂತೋಷ ಮೇಲ್ಮಿನಿ, ಸುನೀಲ್ ಮಾನಪಡೆ, ಎಂ.ಬಿ.ಸಜ್ಜನ, ಹಣಮಂತ ಇಟಗಿ, ದತ್ತಾತ್ರೇಯ ಇಕ್ಕಳಕಿ, ದತ್ತಾತ್ರೇಯ ಕುಡುಕಿ, ಶ್ರೀಮಂತ ಬಿರಾದಾರ, ಕೋದಂಡ ರಾಮ ಪಾಲ್ಗೊಂಡಿದ್ದರು.