ಕಲಬುರಗಿ: ರಾಷ್ಟ್ರದಲ್ಲಿ ವೀರ ಪರಾಕ್ರಮದ ಜೊತೆಯಲ್ಲಿ ಧೈರ್ಯ ಮತ್ತು ಸಾಹಸಗಳನ್ನು ಪ್ರದರ್ಶಿಸಿ ಪ್ರಜೆಗಳ ಸಂರಕ್ಷಣೆಯೊಂದಿಗೆ ಸಾಮ್ರಾಜ್ಯ ವಿಸ್ತರಣೆಯಲ್ಲೂ ಸಹ ವಿಶೇಷ ಆಸಕ್ತಿ ತೋರಿದ ಅಸಮಾನ್ಯ ಮಹಾರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಸಹ ಒಬ್ಬರಾಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಭೀಮರಾವ ಸಾಳುಂಕೆ ಹೇಳಿದರು.
ಅವರು ರವಿವಾರ ಶಹಾಬಾದ ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಯಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರ ಆಡಳಿತದಲ್ಲಿ ಜನರ ಯೋಗ ಕ್ಷೇಮ ಹಾಗೂ ಸಮರ್ಥ ಆಡಳಿತ ನೀಡುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರು ಚರಿತ್ರೆಯಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದಾರೆ. ಶಿವಾಜಿ ದೇಶದ ದಾಸ್ಯ ಮುಕ್ತಿಗೆ, ಸ್ವಾಭಿಮಾನಿ, ಸ್ವತಂತ್ರ ಜೀವನಕ್ಕೆ ಹೋರಾಡಿದ ಭಾರತದ ಹೆಮ್ಮೆಯ ವೀರ. ಸ್ವರಾಜ್ಯಕ್ಕಿಂತ ಮಿಗಿಲಾದ ಆಸಕ್ತಿ ಜೀವನದಲ್ಲಿ ಇನ್ನಾವುದೂ ಇಲ್ಲ ಎಂದು ನಂಬಿದ್ದರು ಎಂದು ಹೇಳಿದರು.
ಮರಾಠ ಸಮಾಜದ ಯುವ ಮುಖಂಡ ದತ್ತಾ ಫಂಡ್ ಮಾತನಾಡಿ,ಛತ್ರಪತಿ ಶಿವಾಜಿ ಮಹಾರಾಜರು ಅವರು ತೋರಿದ ತತ್ವನಿμÉ್ಠ, ಉತ್ತಮ ವೌಲ್ಯ, ಕ್ರಾಂತಿಕಾರಕ ಸುಧಾರಣೆ, ತ್ಯಾಗ, ರಾಷ್ಟ್ರಪ್ರೇಮ, ಧೈರ್ಯ ಹೋರಾಟ ಮುಂತಾದ ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.