ಬಸವಕಲ್ಯಾಣ: ಮಾ. 4ರಿಂದ 5ರವರೆಗೆ ಎರಡು ದಿನಗಳ ಕಾಲ ನಡೆದ ಪ್ರಥಮ ರಾಷ್ಟ್ರೀಯ ಲಿಂಗಾಯತ ಅಧಿವೇಶನದಲ್ಲಿ 12 ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಸ್ತ ಲಿಂಗಾಯತರ ಏಕೈಕ ಪ್ರಾತಿನಿಧಿಕ ಸಂಸ್ಥೆ, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂಬ ರಾಜ್ಯ ಸರ್ಕಾರ ಮಾಡಿದ ಶಿಫಾರಸನ್ನು ಕೇಂದ್ರ ಸರ್ಕಾರ ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಸರ್ವಾನುಮತದಿಂದ ಒತ್ತಾಯಿಸಿದರು.
ಬಸವ ಜಯಂತಿ ಆಚರಿಸಲು ಜಾಗತಿಕ ಲಿಂಗಾಯತ ಮಹಾಸಭಾಕ್ಕೆ ಪ್ರಥಮ ಆದ್ಯತೆಯನ್ನು ನೀಡಬೇಕು, ರಾಷ್ಟ್ರದ ರಾಜಧಾನಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಂಸತ್ ಭವನಕ್ಕೆ ಅನುಭವ ಮಂಟಪ ನಾಮಕರಣ ಮಾಡಿ, ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿ ರಾಷ್ಟ್ರೀಯ ಸ್ಮಾರಕ ಘೋಷಿಸುವಂತೆ ಆಗ್ರಹಿಸಿದರು.
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಸರ್ಕಾರ ಘೋಷಿಸಬೇಕು, ಜನಗಣತಿ ಅಥವಾ ಇನ್ನಾವುದೋ ಸಮೀಕ್ಷೆಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಧರ್ಮದ ಕಾಲಂ ನಲ್ಲಿ ಲಿಂಗಾಯತ ಧರ್ಮೀಯರೆಂದೇ ದಾಖಲಿಸಬೇಕು, ಶಾಲಾ ಕಾಲೇಜುಗಳಲ್ಲಿ ಶರಣ ಸಾಹಿತ್ಯ ಪರಿಚಯಿಸುವ ಪಠ್ಯಕ್ರಮ ಅಳವಡಿಸಬೇಕು, ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಸಭಾದ ಪ್ರಮುಖರಾದ ಜಿ.ಬಿ. ಪಾಟೀಲ ನಿರ್ಣಯ ಮಂಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ, ಭಾಲ್ಕಿ ಶ್ರೀ, ಇಳಕಲ್ ಶ್ರೀ ಮತ್ತಿತರರು ಇದ್ದರು.