ಚನ್ನಗಿರಿ ಶಾಸಕ ವಿರೂಪಾಕ್ಷಪ್ಪ ಮಾಡ್ಯಾಳ ಹಾಗೂ ಅವರ ಪುತ್ರನಿಗೆ ಸಂಬಂಧಿಸಿದ ಹಗರಣವು ಉಗುಳಿದವರು ಊಟಕ್ಕೆ ಹೇಳಿದ್ದಾರೆ ಅನ್ನುವಂತಿದೆ. ಬಿಜೆಪಿ ಪಕ್ಷದವರು ಇವರನ್ನು ಪಕ್ಷದಿಂದ ಹೊರ ಹಾಕಬೇಕು. ಬಿಜೆಪಿಯ ಅಮಿತ್ ಶಾ, ಮೋದಿ ಹಾಗೂ ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೋ?. -ಬಿ.ಆರ್. ಪಾಟೀಲ, ಮಾಜಿ ಶಾಸಕ, ಆಳಂದ
ಕಲಬುರಗಿ: ಆಳಂದ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ ಪುತ್ರ ಗಣೇಶ ಗುತ್ತೇದಾರ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿ ಸರ್ಕಾರಕ್ಕೆ ಮೋಸ ಮತ್ತು ವಂಚನೆ ಮಾಡಿ ಟೆಂಡರ್ ಪಡೆದು ಕಾಮಗಾರಿ ನಿರ್ವಹಿಸುತ್ತಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಇಎಂಡಿ ಮತ್ತು ಎಫ್ ಎಸ್ ಡಿ ಸಹಿತ ಪಾವತಿಸಬೇಕಾಗಿರುವ ಬಿಲ್ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಗುತ್ತಿಗೆದಾರರ ಪರವಾನಗಿ ಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಆಗ್ರಹಿಸಿದರು.
ಕಳೆದ ಐದು ವರ್ಷದಲ್ಲಿ ತಮ್ಮ ಸ್ವಂತ ಹೆಸರಿನಲ್ಲಿ ಸುಮಾರು 70 ಕೋಟಿ ರೂ. ಗುತ್ತಿಗೆ ಪಡೆದುದಲ್ಲದೆ ಬೇರೆಯವರ ಹೆಸರಲ್ಲೂ ಪಡೆದಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಟೆಂಡರ್ ಹಾಕಲು ಬರುವವರಿಗೆ ಹೆದರಿಕೆ ಹಾಕಿ, ರಾಜಿ ಸಂಧಾನ ಅಥವಾ ಗುಡ್ ವಿಲ್ ಕೊಟ್ಟು ಕಾಮಗಾರಿ ಮಾಡಿರುತ್ತಾರೆ. ಅದರಲ್ಲೂ ಆಳಂದ ಚೆಕ್ ಪೆÇೀಸ್ಟ್ ನಿಂದ ಸುಗರ್ ಫ್ಯಾಕ್ಟರಿವರೆಗಿನ ರಸ್ತೆ ಕಳಪೆ ಕಾಮಗಾರಿಯಾಗಿರುತ್ತದೆ. ಸರ್ಕಾರಕ್ಕೆ ಮೋಸ ಮಾಡಿ ವರ್ಕ್ ಡನ್ ಸರ್ಟಿಫಿಕೇಟ್ ಪಡೆದಿರುತ್ತಾರೆ ಎಂದು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕೆಬಿಜೆಎನ್ಎಲ್ ನ 22 ಕೋಟಿ ರೂ.ಟೆಂಡರ್ ಹಾಕುವುದಕ್ಕೆ 10.99 ಮೊತ್ತದ ಕಾಮಗಾರಿ ನಿರ್ವಸಿರುವುದಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿರುತ್ತಾರೆ. ಈ ಟೆಂಡರ್ ಪಡೆಯಲು ಸಲ್ಲಿಸಲಾಗಿರುವ ವರ್ಕ್ ಡನ್ ಸೇರಿದಂತೆ ಸೇರಿದಂತೆ ಕೆಲವು ದಾಖಲಾತಿಗಳನ್ನು ಮುಖ್ಯ ಯೋಜನಾಧಿಕಾರಿಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್ ಎಚ್ ಡಿ ಪಿ) ಯವರ ಕಚೇರಿಯಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದು, ಸಂಬಂಧಪಟ್ಟ ಇಲಾಖೆಯಲ್ಲಿ ವಿಚಾರಿಸಿದಾಗ, ಸದರಿ ಗುತ್ತಿಗೆದಾರ ಕೆಬಿಜೆಎನ್ ಎಲ್ ನಿಂದ ಪಡೆದು ಸಲ್ಲಿಸಿರುವ ದಾಖಲೆ ಸಂಪೂರ್ಣ ವಾಗಿ ನಕಲಿಯಾಗಿದೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದರು.
ಈ ಕುರಿತು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೆ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. ಮಲ್ಲಿಕಾರ್ಜುನ ಪೂಜಾರಿ, ಖೇಮ್ ಸಿಂಗ್ ರಾಠೋಡ್, ಗಣೇಶ ಪಾಟೀಲ ಇತರರಿದ್ದರು.