ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದ ಶ್ರೀ ನಂದಿ ಬಸವೇಶ್ವರ 74ನೇ ಜಾತ್ರಾ ಮಹೋತ್ಸವವನ್ನು ಮೇ 4ರ ಶನಿವಾರದಂದು ಆಯೋಜಿಸಲಾಗಿದೆ ಎಂದು ಗ್ರಾಮದ ಶ್ರೀ ನಂದಿಬಸವೇಶ್ವರ ಸೇವಾ ಸಮಿತಿ ಹಾಗೂ ಸಕಲ ಸದ್ಭಕ್ತಮಂಡಳಿ ವತಿಯಿಂದ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸಳ್ಳಿ (ಎಚ್) ಗ್ರಾಮದ ಸಂಸ್ಥಾನ ಹೀರೆಮಠದ ಶ್ರೀ ಷ. ಬ್ರ. ಸಿದ್ದಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ದಿನಾಂಕ 29 ರಿಂದ 2ರ ವರೆಗೆ ಪ್ರತಿದಿನ ರಾತ್ರಿ 08 ರಿಂದ 11.30ರ ವರೆಗೆ ಪಲ್ಲಕ್ಕಿ ಮಹೋತ್ಸವ ಜರುಗುವುದು.
3 ರಂದು ಸಾಯಂಕಾಲ 5 ಗಂಟೆಗೆ ಅಗ್ನಿ ಕುಂಡಕ್ಕೆ ನೀರು ಎರೆಯಲಾಗುವುದು. 4 ರಂದು ಬೆಳಿಗ್ಗೆ 03 ಗಂಟೆಯಿಂದ 6 ಗಂಟೆಯವರೆಗೆ ಪಲ್ಲಕ್ಕಿ ಮಹೋತ್ಸವ ಮತ್ತು ಪುರವಂತರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತದನಂತರ ಅಗ್ನಿ ಪ್ರವೇಶ ಮಾಡಲಾಗುವುದು.
ಅದೇ ದಿನ ಸಾಯಂಕಾಲ 6ಗಂಟೆಗೆ ಕುಂಭ, ನಂದಿಕೋಲು, ಭಜನೆ ಹಾಗೂ ಮೆರವಣಿಗೆಯೊಂದಿಗೆ ನಂದಿಬಸವೇಶ್ವರರ 74ನೇ ಜಾತ್ರಾಮಹೋತ್ಸವದ ರಥೋತ್ಸವವನ್ನು ವಿಜೃಂಭಣೆಯಿಂದ ಜರುಗುವುದು. 5 ರಂದು ಬೆಳಿಗ್ಗೆ 08ಗಂಟೆಯಿಂದ ಜಂಗಿ ಪೈಲ್ವಾನರ ಕುಸ್ತಿ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.