ಆಗಸ್ಟ್ 25ರೊಳಗೆ ಕಬ್ಬಿನ ಬಾಕಿ ಹಣ ಬಿಡುಗಡೆಗೆ ಭರವಸೆ
ಕಲಬುರಗಿ: ಕಬ್ಬಿನ ಬಾಕಿ ಹಣ ಪಾವತಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಗುರುವಾರ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರದರ್ಶನ ಮಾಡಿದರು. ಈ ವೇಳೆ ಮಧ್ಯಾಹ್ನದ ಊಟವನ್ನು ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದಿನ ಪ್ರತಿಭಟನಾ ಸ್ಥಳದಲ್ಲಿಯೇ ಮಾಡಿದರು. ಸಂಜೆಗೆ ಅಪರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಕಬ್ಬು ಬಾಕಿ ಹಣವನ್ನು ಆಗಸ್ಟ್ 25ರೊಳಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿ, ಗೂಳುರು ಮತ್ತು ಜೇವರ್ಗಿ ಮೊನಟಗಿ ಬ್ರಿಜ್ ಕಂ ಬ್ಯಾರೇಜ್ ಮುಳುಗಡೆ ರೈತರಿಗೆ ಪರಿಹಾರ ಕೊಟ್ಟು ಗಟ್ ಕೂಡಿಸಿ ನೀರಾವರಿ ಪ್ರದೇಶ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ಟನ್ ಕಬ್ಬಿಗೆ ಐದು ಸಾವಿರ ನೀಡಬೇಕು. ಎಫ್ಅರ್ಪಿಯನ್ನು ಶೇಕಡಾ 8.5ರಷ್ಟು ಇಳುವರಿ ಆಧಾರದ ಮೇಲೆ ನಿಗದಿ ಮಾಡಬೇಕು. ಕಟಾವು ಮತ್ತು ಸಾಗಾಣಿಕೆ ವೆಚ್ಚ 2023 .2024ನೇ ಸಾಲಿನಲ್ಲಿ ಆಯುಕ್ತರು ನಿಗದಿಪಡಿಸಿರುವ ದರಕ್ಕೆ ಅನುಗುಣವಾಗಿ ಸಕ್ಕರೆ ಕಾರ್ಖಾನೆ ಮಾಲೀಕರುಗಳು ನಡೆದುಕೊಳ್ಳದೆ ಇರುವುದು ಹಾಗೂ ಕಬ್ಬು ಕಟವಾದ 14 ದಿನದೊಳಗೆ ಹಣಪಾವತಿ ಮಾಡುತ್ತಿಲ್ಲ ಎಂದು ಅವರು ದೂರಿದರು.
ರೇಣುಕ ಶುಗರ್ಸ್ ಹಾವಳಗಾ ಸಕ್ಕರೆ ಕಾರ್ಖಾನೆ ಒಟ್ಟು 23000 ಜನ ರೈತರ ಒಟ್ಟು 10 ಲಕ್ಷ ಟನ್ ಎಫ್ಆರ್ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 112 ರೂ.ಗಳಂತೆ ಒಟ್ಟು ಹಣ 112000000ರೂ.ಗಳನ್ನು ಕಬ್ಬಿನ ಬಾಕಿ ಹಣ ಕೊಡಬೇಕು. ಚಿಣಮಗೆರಾ ಸಕ್ಕರೆ ಕಾರ್ಖಾನೆಯಲ್ಲಿ ಎಫ್ಆರ್ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 162 ರೂ.ಗಳಂತೆ ಒಟ್ಟು 25000 ಜನ ರೈತರು ಮತ್ತು ಒಟ್ಟು 11 ಲಕ್ಷ ಟನ್ ಕಬ್ಬಿನ ಬಾಕಿ ಹಣ ಒಟ್ಟು ಹಣ 178200000 ರೂ.ಗಳು ಬಾಕಿ ಹಣ ಕೊಡಬೇಕು. ಭೂಸನೂರು ಸಕ್ಕರೆ ಕಾರ್ಖಾನೆ ಎಫ್ಆರ್ಪಿ ಪ್ರಕಾರ 3018 ಪ್ರತಿ ಟನ್ ಕಬ್ಬಿಗೆ ಹಣ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಭೂಸನೂರು ಸಕ್ಕರೆ ಕಾರ್ಖಾನೆ ಈಗಾಗಲೇ ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ಹೊರತುಪಡಿಸಿ ಪ್ರತಿ ಟನ್ ಕಬ್ಬಿಗೆ 2450 ರೂ.ಗಳನ್ನು ಕೊಟ್ಟಿದ್ದಾರೆ. ಕಬ್ಬು ಬೆಳೆಗಾರರ ಮಹಾ ಮೋಸ ಮಾಡಿದೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಕೊಡಬೇಕು ಎಂದು ಆಗ್ರಹಿಸಿದ ಅವರು, ಉಗಾರ್ ಶುಗರ್ಸ್ ಸಕ್ಕರೆ ಕಾರ್ಖಾನೆ ಜೇವರ್ಗಿ ತಾಲ್ಲೂಕಿನ ನಾಗರಹಳ್ಳಿ ಸಕ್ಕರೆ ಕಾರ್ಖಾನೆ ಎಫ್ಆರ್ಪಿ ಪ್ರಕಾರ ಪ್ರತಿ ಟನ್ ಕಬ್ಬಗೆ 3150 ರೂ.ಗಳನ್ನು ಕೊಡಬೇಕು. ಸಕ್ಕರೆ ಇಳುವರಿ ಆದರದಲ್ಲಿ ಸಕ್ಕರೆ ಕಾರ್ಖಾನೆ ಜೇವರ್ಗಿ ತಾಲ್ಲೂಕಿನಲ್ಲಿ ಕೊಡಬೇಕು ಆದಾಗ್ಯೂ, ಈಗಾಗಲೇ ಪ್ರತಿ ಟನ್ನ ಕಬ್ಬಿಗೆ 2500 ರೂ.ಗಳು ಮಾತ್ರ ಕೊಟ್ಟು ಕೈ ತೊಳಕೊಂಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಕ್ಕರೆ ಇಳುವರಿಯನ್ನ ಪರೀಕ್ಷಿಸಲು ರೈತರ ಒಳಗೊಂಡಂತಹ ಸಮಿತಿಯನ್ನ ರಚಿಸದೆ ಇರುವುದರಿಂದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಇಳುವರಿಯನ್ನು ಕಡಿಮೆ ನಿಗದಿಪಡಿಸುವುದರ ಮೂಲಕ ರೈತರನ್ನು ವಂಚಿಸುತ್ತಿರುವ ಬಗ್ಗೆ ಹಾಗೂ ತೂಕದಲ್ಲಿ ವ್ಯತ್ಯಾಸ ಆಗುತ್ತಿರುವುದರ ಬಗ್ಗೆ ಚರ್ಚಿಸಿ ಅಳತೆ ಮತ್ತು ತೂಕ ಮಾಪನ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಸರ್ಕಾರವೇ ಎಪಿಎಂಸಿಗಳ ಮೂಲಕವೇ ಬ್ರಿಡ್ಜ್ ನಿರ್ಮಿಸಿ ತೂಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
2022-2023ನೇ ಸಾಲಿನಲ್ಲಿ ಪ್ರತಿ ಟೆನ್ ಕಬ್ಬಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಎಸ್ಎಪಿ ಪ್ರತಿ ಟನ್ಗೆ ನೂರು ರೂ.ಗಳು ಮತ್ತು ಡಿಸ್ಟೀಲರಿ ಇರುವ ಕಾರ್ಖಾನೆಗಳು ನೂರ ಐವತ್ತು ರೂ.ಗಳ ಬಾಕಿ ಹಣ ನೀಡಬೇಕೆಂಬ ತೀರ್ಮಾನವನ್ನು ಜಾರಿಗೊಳಿಸುವ ಸಂಬಂಧ. ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಲಾಭದಲ್ಲಿ ರೈತರಿಗೆ ಪಾಲು ನೀಡಬೇಕು ಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ಧರಾಮ್ ದಣ್ಣೂರ್, ಅಶೋಕ್ ಹೂಗಾರ್, ಶರಣು ಕಾವುಲಗಿ, ಸಿದ್ದಪ್ಪಾ ಗುಡ್ಡೆದ್ ಘತ್ತರ್ಗಾ, ಶ್ರೀಶೈಲ್ ಅಮಣಿ, ಶ್ರೀಕಾಂತ್ ಸಿಂಗೆ, ಅರ್ಜುನ್ ಕುಂಬಾರ್ ಕೊಳುರು, ಗೌಡಪ್ಪಗೌಡ ಪಾಟೀಲ್, ರುಕ್ಕುಮ್ಸಾಬ್ ಮುಲ್ಲಾ, ಮಹಾಲಿಂಗ ಮಾಲಿಂಗಪೂರ್, ಶೆಂಕ್ರಪ್ಪಾ ಮ್ಯಾಕೇರಿ ದೇಸಾಯಿ ಕಲ್ಲೂರು, ರಾಯ್ಯಪ್ಪಾ ಮ್ಯಾಕೇರಿ, ಜೆಟ್ಟೆಪ್ಪಾ ಉಕಲಿ, ಶರಣಪ್ಪಾ ಮ್ಯಾಕೇರಿ ಗುಡ್ಡೆವಾಡಿ, ಜಗು ತೆಲ್ಕೂರು, ಈರಪ್ಪಾ ನೆಲೋಗಿ, ಭಿಮಣ್ಣಾ ಕೊಳ್ಳುರು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.