ಕಲಬುರಗಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೆ. 15ರಂದು (ರವಿವಾರ) ಅಖಂಡ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ, ಶ್ರವಣೋಪವಾಸ ಪರ್ವದಿನದ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀಮಠದ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಪ್ರಾಜೆಕ್ಟ್ ನ ಗೌರವ ನಿರ್ದೇಶಕರಾದ ಕೆ. ಅಪ್ಪಣ್ಣಾಚಾರ್ಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಲಬುರಗಿಯ ಶ್ರೀ ಪಾಂಡುರಂಗ ಭಜನಾ ಮಂಡಳಿಯ (ವಾರಕರಿ) 20 ಸದಸ್ಯರು ಭಾಗವಹಿಸಿ ಹರಿನಾಮ ಭಜನೆ ಮಾಡಲಿದ್ದಾರೆ ಎಂದು ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಕಲಬುರಗಿ ವಿಭಾಗದ ಉಪ ನಿರ್ದೇಶಕರಾದ ಭೀಮಭಟ್ಟ ಬೆಂಕಿ ಮೋತಕಪಲ್ಲಿ ತಿಳಿಸಿದ್ದಾರೆ.
ಕೋಲಾಟ ಸ್ಪರ್ಧೆ; ಮಂತ್ರಾಲಯದಲ್ಲಿ ಸೆ. 17 ಮತ್ತು 18ರಂದು ಕೋಲಾಟ ಸ್ಪರ್ಧೆ ಆಯೋಜಿಸಲಾಗಿದ್ದು, ಕಲಬುರಗಿ ನಗರದ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ, ಶ್ರೀಗೌರಿ ಭಜನಾ ಮಂಡಳಿ, ಶ್ರೀ ಗೋಪಾಲಕೃಷ್ಣ, ಶ್ರೀ ವೆಂಕಟೇಶ ಮತ್ತು ಶ್ರೀ ಪ್ರಭಂಜನ ಭಜನಾ ಮಂಡಳಿ ಸದಸ್ಯರು ಭಾಗವಹಿಸುವರು ಎಂದು ಭೀಮಭಟ್ಟ ಬೆಂಕಿ ತಿಳಿಸಿದ್ದಾರೆ.