ಬೆಂಗಳೂರು: ನಿನ್ನೆ ರಾತ್ರಿ ಮೈಸೂರಿನ ವಿವಾಹ ಕಾರ್ಯಕ್ರಮದಲ್ಲಿ ನರಸಿಂಹರಾಜ ವಿಧಾನಸಭಾ ಶಾಸಕ, ಮಾಜಿ ಸಚಿವರಾದ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆಯು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಒಬ್ಬ ಜನಪ್ರತಿನಿಧಿಯ ಮೇಲೆ ಸಾರ್ವಜನಿಕರ ಸಮ್ಮುಖದಲ್ಲೇ ದಾಳಿ ಮಾಡುತ್ತಿರುವುದು ಘಟನೆಯ ಭೀಕರತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿ, ಆತಂಕಗಳನ್ನು ಸೃಷ್ಟಿಸುತ್ತದೆ. ದಾಳಿಕೋರನನ್ನು ಬಂಧಿಸಿರುವ ಪೊಲೀಸರು, ಘಟನೆಯ ಬಗ್ಗೆ ಸೂಕ್ತ ತನಿಖೆಯನ್ನು ಕೈಗೊಂಡು ಘಟನೆಯ ಹಿಂದಿರುವ ನೈಜ ಕಾರಣಗಳನ್ನು ಬಹಿರಂಗ ಪಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಇಲ್ಯಾಸ್ ಮುಹಮ್ಮದ್ ಒತ್ತಾಯಿಸಿದ್ದಾರೆ.
ಅದೇ ರೀತಿ ಈ ಘಟನೆಯನ್ನು ಎಸ್.ಡಿ.ಪಿ.ಐ ಪಕ್ಷ ದ ಜತೆಗೆ ತಳುಕು ಹಾಕುವ ಕೆಲ ಮಾಧ್ಯಮಗಳ ಕುತ್ಸಿತ ಪ್ರಯತ್ನವನ್ನೂ ಇಲ್ಯಾಸ್ ತುಂಬೆ ಖಂಡಿಸಿದ್ದಾರೆ. ಈ ಘಟನೆಗೂ ಎಸ್.ಡಿ.ಪಿ.ಐ ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಕಾರ್ಯಕ್ರಮ ಅಥವಾ ಪ್ರಚಾರ ಸಂದರ್ಭಗಳಲ್ಲಿ ಪ್ರತಿಯೊಂದು ಪಕ್ಷಗಳಲ್ಲೂ ಸಾರ್ವಜನಿಕರು ಭಾಗವಹಿಸುತ್ತಾರೆ. ಎಂದ ಮಾತ್ರಕ್ಕೆ ಅವರು ಎಂದೆಂದೂ ಪಕ್ಷಗಳ ಕಾರ್ಯಕರ್ತರು ಅನ್ನಬೇಕಿಲ್ಲ. ಅವರು ಮಾಡಿದ ಪ್ರತಿಯೊಂದು ಕೃತ್ಯಗಳಿಗೆ ಪಕ್ಷಗಳು ಹೊಣೆಯಲ್ಲ. ಸಮಾಜ ಘಾತಕ ಕೆಲಸವನ್ನು ಯಾರು ಮಾಡಿದರೂ ಅದು ಶಿಕ್ಷಾರ್ಹ ಹಾಗೂ ಒಪ್ಪಲಸಾಧ್ಯವೆಂದು ಇಲ್ಯಾಸ್ ತುಂಬೆಯವರು ಹೇಳಿದ್ದಾರೆ.