ಸುರಪುರ: ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರು ಸೋಮವಾರ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ವೆಂಕೋಬ ಬಾಕಲಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದವಲಸಾಬ ನದಾಫ್ ಮಾತನಾಡಿ, ’ಫೆ. ೨೮ ರಂದು ಪ್ರತಿಭಟನೆ ನಡೆಸಿ ಕೃಷಿ ಕೂಲಿಕಾರರಿಗೆ ನರೇಗಾ ಯೋಜನೆಯಲ್ಲಿ ಕೂಲಿ ನೀಡುವಂತೆ ಆಗ್ರಹಿಸಲಾಗಿತ್ತು. ಅಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ನೀಡಿದ ವಾಗ್ದಾನ ಇದುವರೆಗೂ ಈಡೇರಿಸಿಲ್ಲ’ ಎಂದು ಆರೋಪಿಸಿದರು.
’ಕೆಲಸ ಸಿಗದೆ ಕೂಲಿಕಾರರು ದೊಡ್ಡ ನಗರಗಳಿಗೆ ಗುಳೆ ಹೋಗುವುದು ವ್ಯಾಪಕವಾಗಿ ನಡೆದಿದೆ. ಮೊದಲೆ ಕರೋನಾ ಭೀತಿ ತಲ್ಲಣಗೊಳಿಸಿದೆ. ಕೂಲಿ ಸಿಗದೆ ಉಪವಾಸ ಬೀಳಬೇಕೆ ಅಥವಾ ಗುಳೆ ಹೋಗಿ ಆನಾರೋಗ್ಯಕ್ಕೆ ಈಡಾಗಬೇಕೆ’ ಎಂದು ಪ್ರಶ್ನಿಸಿದರು.
ದೇವಾಪುರ, ಆಲ್ದಾಳ, ಬೈಚಬಾಳ ಕಚಕನೂರ, ರುಕ್ಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಕ್ಷಣ ಜಾಬ್ ಕಾರ್ಡ್ ವಿತರಿಸಿ ಕೂಲಿಕಾರರಿಗೆ ಕೆಲಸ ನೀಡಬೇಕು. ರೂ. ೧೦ ಸಲಕರಣೆ ಬಾಡಿಗೆ ನೀಡಿಬೇಕು. ನೆರಳಿನ, ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
ಖಾಜಾಸಾಬ ನಾಗರಾಳ, ರಾಜು ದೊಡ್ಡಮನಿ, ಖಾಜಾಸಾಬ ಬೋನ್ಹಾಳ, ಹುಸನಪ್ಪ ಪುಜಾರಿ, ನಿಂಗಪ್ಪ ಹಡಪದ, ವೀರೇಶ ಕವಡಿಮಟ್ಟಿ ಇತರರು ಇದ್ದರು.
—