ಶಹಾಬಾದ: ಗ್ರಾಪಂ ಸಿಬ್ಬಂದಿಗಳ ಬಾಕಿ ವೇತನ ಪಾವತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದವರು ಮಗುಗುಳನಾಗಾವ ಗ್ರಾಪಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ.ಸಿ.ಹೊನಗುಂಟಾ, ಗ್ರಾಪಂ ಸಿಬ್ಬಂದಿಗಳ ಬಾಕಿ ವೇತನ ಪಾವತಿ ಮಾಡದೇ ಅಧಿಕಾರಿ ವರ್ಗದವರು ವಿನಾಕಾರಣ ವಿಳಂಬ ಧೋರಣೆ ತೋರುತ್ತಿದ್ದಾರೆ. ಈಗಾಗಲೇ ಕೋವಿಡ್-೧೯ ದಿಂದ ಜನಸಾಮಾನ್ಯರ ಬದುಕು ಅಲ್ಲೊಲ ಕಲ್ಲೊಲವಾಗಿದೆ. ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ ದುಡಿದ ಹಣ ನೀಡದೇ ಅಧಿಕಾರಿ ವರ್ಗ ಕಿರುಕುಳ ನೀಡುತ್ತಿದ್ದಾರೆ. ಕೂಡಲೇ ಬಾಕಿ ಇರುವ ೧೦ ತಿಂಗಳ ವೇತನ ಪಾವತಿ ಮಾಡಬೇಕು ಸೇರಿದಂತೆ ಇಎಫ್ಎಮ್ಎಸ್ ಸಿಬ್ಬಂದಿಗಳನ್ನು ಅಳಡಿಸಬೇಕು.ತೆರಿಗೆ ವಸೂಲಾತಿ ಹಣದಲ್ಲಿ ಶೇ ೪೦ರಷ್ಟು ಹಾಗೂ ೧೪ನೇ ಹಣಕಾಸು ಯೋಜನೆಯಲ್ಲಿ ಶೇ ೧೦% ಸಿಬ್ಬಂದಿಗಳ ವೇತನ ಪಾವತಿಸಬೇಕು.ಪಂಚಾಯತ ಸಿಬ್ಬಂದಿಗಳಿಗೆ ನಿವೃತ್ತಿ ಉಪದಾನ ನೀಡಬೇಕು. ಸಿಬ್ಬಂದಿಗಳಿಗೆ ಸೇವಾ ಪುಸ್ತಕ ಕಡ್ಡಾಯವಾಗಿ ನಿರ್ವಹಣೆ ಮಾಡಬೇಕೆಂದು ಆಗ್ರಹಿಸಿದರು.
ತಾಪಂ ಸಹಾಯಕ ನಿರ್ದೇಶಕ ಸೋಮಶೇಖರ, ಗ್ರಾಪಂ ಪಿಡಿಓ ಮಹಾನಂದ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ದತ್ತಾತ್ರಿ. ಎಮ್.ಕಲಾಲ,ಮುಖಂಡರಾದ ಅಶೋಕ ಮ್ಯಾಗೇರಿ, ರಾಯಪ್ಪ ಹುರಮುಂಜಿ, ಚಂದು ಜಾಧವ, ಪಿಎಸ್ಐ ಯಲ್ಲಮ್ಮ ಹಾಗೂ ಗ್ರಾಪಂ ನೌಕರರು ಇದ್ದರು.