ಸುರಪುರ: ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಕಂಡು ಬರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸರಕಾರ ಇಂದು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು ಈ ಕುರಿತು ಜಾಗೃತಿ ಮೂಡಿಸಬೇಕು ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಎಲ್ಲರೂ ಆರೋಗ್ಯದಿಂದ ಇರಬೇಕಾದರೆ ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕಾಂಶ ಆಹಾರ ಸೇವನೆ ತುಂಬಾ ಅಗತ್ಯ ಎಂದು ನಗರದ ಖುರೇಷಿ ಮೊಹಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರ ಗು ಸಾಮ್ಯುವೇಲ್ ಹೇಳಿದರು.
ಮಂಗಳವಾರದಂದು ಅವರು ನಗರದ ಗೋಗಿಕೇರಾ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗರ್ಭಿಣಿಯರಲ್ಲಿ ಪೌಷ್ಠಿಕಾಂಶಗಳ ಕೊರತೆ ಉಂಟಾದರೆ ಅದು ತಾಯಿ ಮತ್ತು ಮುಂದೆ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಕಾರಣ ತಾಯಿ ಆರೋಗ್ಯ ಚೆನ್ನಾಗಿರಲು ಹಾಗೂ ಆರೋಗ್ಯವಂತ ಮಗು ಜನಿಸಲು ಪೌಷ್ಠಿಕಾಂಶ ಆಹಾರ ಸೇವನೆ ತುಂಬಾ ಅತ್ಯಗತ್ಯ ಎಂದರು.
ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ಹೋಗಲಾಡಿಲು ಜಾಗೃತಿ ಮೂಡಿಸುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಯೊಂದು ಮಗುವನ್ನು ತಮ್ಮ ಮಕ್ಕಳೆಂದು ಭಾವಿಸಿ ಅಕ್ಷರಭ್ಯಾಸದ ಜೊತೆಗೆ ಮಕ್ಕಳ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು ಎಂದ ಅವರು, ಪೋಷಕರು ಕೂಡಾ ಮಕ್ಕಳಿಗೆ ಹಸಿರು ಸೊಪ್ಪು, ತರಕಾರಿ, ಹಣ್ಣುಗಳನ್ನು ತಿನ್ನಿಸುವ ಮೂಲಕ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ನಿವಾರಿಸಲು ಸರಕಾರದ ಜೊತೆಗೆ ಸಹಕರಿಸಬೇಕು ಎಂದು ಹೇಳಿದರು.
ಶಿಕ್ಷಕ ರವಿ ಗಲಗಿನ, ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಸುರೇಖಾ ಮಾತನಾಡಿ ಪೌಷ್ಠಿಕಾಂಶ ಆಹಾರಗಳ ಸೇವನೆಯ ಮಹತ್ವ ಕುರಿತು ತಿಳಿಸಿಕೊಟ್ಟರು. ಆಶಾ ಕಾರ್ಯಕರ್ತೆ ಖಾಜಾಬಿ ಹಾಗೂ ಓಣಿಯ ಮಕ್ಕಳು ಮತ್ತು ಗರ್ಭಿಣಿಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರದ ವತಿಯಿಂದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.