ಕಲಬುರಗಿ: ಮುಂದಿನ ತಿಂಗಳ ೯ ರಂದು ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಿಗದಿತ ದಿನಾಂಕದಂದೇ ನಡೆಯಲಿ. ಲಾಕ್ ಡೌನ್ ನೆಪ ಮಾಡಿ ಚುನಾವಣೆ ಮುಂದೂಡುವುದು ಬೇಡ. ಸಾರ್ವತ್ರಿಕ ಚುನಾವಣೆ ನಡೆಸಿ, ಉಳಿದ ಚುನಾವಣೆಗಳು ಮುಂದೂಡುವುದು ಸಲ್ಲ ಎಂದು ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ನ ಕೇಂದ್ರ ಸ್ಥಾನಕ್ಕೆ ೨೧ ಮಂದಿ ಕಣದಲ್ಲಿದ್ದು, ರಾಜ್ಯಾದ್ಯಂತ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದವರು ವಿವಿಧ ತಾಲೂಕು ಮತ್ತು ವಲಯ ಪ್ರವಾಸ ಮಾಡಿ ಹಣ ಖರ್ಚು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಸಾಪ ಚುನಾವಣೆ ಮುಂದೂಡುವುದು ಬೇಡ ಎಂದಿದ್ದಾರೆ.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲೆ ಎರಡು ವಿಧಾನ ಸಭೆ ಮತ್ತು ಬೆಳಗಾವಿ ಲೋಕಸಭೆ ಉಪಚುನಾವಣೆ ನಡೆಸಲಾಗಿದೆ. ಅದಕ್ಕೆ ಅನ್ವಯವಾಗದ ನಿಯಮ ಕಸಾಪ ಚುನಾವಣೆಗೆ ಏಕೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಒಂದು ವೇಳೆ ಲಾಕ್ ಡೌನ್ ನೆಪದಿಂದ ಚುನಾವಣೆ ಮುಂದೂಡುವುದೇ ಆದಲ್ಲಿ, ಲಾಕ್ ಡೌನ್ ಅವಧಿ ಮುಗಿದ ನಂತರ ಮೇ ತಿಂಗಳಿನಲ್ಲಿಯೇ ದಿನಾಂಕ ನಿಗದಿ ಮಾಡಿ ಅದೇ ನಾಮಪತ್ರದ ಮೇಲೆ ಚುನಾವಣೆ ನಡೆಸಬೇಕು ಎಂದು ಚುನಾವಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.