ಸುರಪುರ: ರಾಜ್ಯದಲ್ಲಿ ಇನ್ನುಕೂಡ ಕೋವಿಡ್ ಅಕೆ ಇರುವ ಕಾರಣದಿಂದಾಗಿ ಸರಕಾರದ ಆದೇಶದಂತೆ ಈಬಾರಿಯ ಸರಳವಾಗಿ ಸ್ವಾತಂತ್ರ್ಯ ದಿನ ಆಚರಿಸೋಣ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
ನಗರದ ತಹಸೀಲ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಈ ಮುಂಚೆ ಪ್ರತಿವರ್ಷ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿತ್ತು,ಆದರೆ ಈಗ ಕೊರೊನಾ ಕಾರಣದಿಂದ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಸರಕಾರದ ಆದೇಶದ ಕಾರಣದಿಂದ ತಹಸೀಲ್ ಕಚೇರಿಯಲ್ಲಿಯೆ ಸರಳವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ಅಲ್ಲದೆ ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಬೆಳಿಗ್ಗೆ ೮ ಗಂಟೆಯ ಒಳಗೆ ಕಡ್ಡಾಯವಾಗಿ ಆಚರಣೆ ಮಾಡಬೇಕು.ಯಾವುದೇ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡದೆ ಇರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.ಅಲ್ಲದೆ ಮುಖ್ಯವಾಗಿ ತಾಲೂಕಿನ ಎಲ್ಲಾ ಬ್ಯಾಂಕ್ಗಳಿಗೂ ಸೂಚನೆಯನ್ನು ನೀಡುವಂತೆ ತಿಳಿಸಿದರು.ಅಲ್ಲದೆ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಭೆಗೆ ಬಾರದಿರುವ ಅನೇಕ ಇಲಾಖೆಗಳ ಅಧಿಕಾರಿಗಳ ವಿರುದ್ಧ ಮುಖಂಡರು ತೀವ್ರ ಬೇಸರವ್ಯಕ್ತಪಡಿಸಿದರು.ಅಲ್ಲದೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಲಾಲಸಾಬ್ ಪೀರಾಪುರ,ತಾಲೂಕು ಪಂಚಾಯತಿ ವ್ಯವಸ್ಥಾಪಕ ವೆಂಕೋಬ ಬಾಕ್ಲಿ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ,ನಗರಸಭೆ ಎಸ್ಐ ಶಿವಪುತ್ರ ಹಾಗು ಮುಖಂಡರಾದ ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ನ್ಯಾಯವಾದಿ ಯಲ್ಲಪ್ಪ ಹುಲಿಕಲ್,ದಾವೂದ್ ಇಬ್ರಾಹಿಂ ಪಠಾಣ್, ಗೃಹರಕ್ಷಕ ದಳದ ರಮೇಶ ಅಂಬುರೆ,ವೆಂಕಟೇಶ ಸುರಪುರ ಸೇರಿದಂತೆ ಶಿಕ್ಷಣ ಇಲಾಖೆ,ಅಲ್ಪಸಂಖ್ಯಾತರ ಇಲಾಖೆ,ಅಬಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗು ಸಾರ್ವಜನಿಕರು ಸಭೆಯಲ್ಲಿದ್ದರು.