ಶಹಾಬಾದ: ಕರೊನಾ ಮಹಾಮಾರಿ ಕಾಲಿಟ್ಟ ಬಳಿಕ ಸತತ ೧೭ ತಿಂಗಳು ಮನೆಯ ನಾಲ್ಕು ಗೋಡೆಗಳ ನಡುವೆಯೇ ಆಟ,ಪಾಠಕ್ಕೆ ಸೀಮಿತವಾಗಿದ್ದ ಮಕ್ಕಳನ್ನು ಪ್ರಾರಂಭೋತ್ಸವದ ದಿನವಾದ ಸೋಮವಾರದಂದು ಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ತಳಿರು, ತೋರಣಗಳನ್ನು ಕಟ್ಟಿ, ರಂಗೋಲಿ ಹಾಕಿ ಸಿಂಗರಿಸಿ, ಮಕ್ಕಳಿಗೆ ಸ್ಕ್ರೀನಿಂಗ್, ಸ್ಯಾನಿಟೈಜರ್ ಸಿಂಪರಣೆ ಮಾಡುವ ಮೂಲಕ ಬರಮಾಡಿಕೊಂಡರು.
ತಾಲೂಕಿನ ಪ್ರತಿ ಶಾಲೆಯ ಆವರಣಗಳಲ್ಲಿ ಹಬ್ಬದ ವಾತಾವರಣ ಕಂಡುಬಂತು.ಶಿಕ್ಷಣ ಇಲಾಖೆಯ ಆದೇಶದಂತೆ ಶಾಲೆ ಸ್ವಚ್ಛಗೊಳಿಸುವುದು, ಸ್ಯಾನಿಟೈಸ್ ಮಾಡುವುದು ಸೇರಿ ಪೂರ್ವಸಿದ್ಧತೆ ಕಾರ್ಯವನ್ನು ಪೂರ್ಣಗೊಳಿಳಿಸಲಾಗಿತ್ತು. ಕರೊನಾ ಸಂಕ?ದ ನಡುವೆ ಶಾಲೆಗೆ ಪ್ರವೇಶಿಸುವ ವಿದ್ಯಾರ್ಥಿಗಳಲ್ಲಿ ಮೊದಲ ದಿನ ಸಕಾರಾತ್ಮಕ ಭಾವನೆ ಮೂಡಿಸುವ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ, ಶಾಲಾ ಆವರಣ ಸಿಂಗರಿಸಿ, ಕರೊನಾ ಆತಂಕಕ್ಕೆ ಒಳಗಾಗದಂತೆ ಶಿಕ್ಷಕರು ಹಾಗೂ ಮಕ್ಕಳಿಗೆ ಆತಸ್ಥೈರ್ಯ ತುಂಬಿದರು.
ಕೊರೊನಾದಿಂದ ಶೈಕ್ಷಣಿಕ ಚಟುವಟಿಕೆಗಳತ್ತ ತಿರುಗದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಯ ಮಕ್ಕಳು ಸೋಮವಾರ ಶಾಲೆಯತ್ತ ತೆರಳಿದರು.ಆದರೆ ಮಕ್ಕಳ ಸಂಖ್ಯೆ ಕಡಿಮೆಯಾದರೂ,ಶಾಲೆ ಪ್ರಾರಂಭವಾಗಿದ್ದು ಮಾತ್ರ ಶಿಕ್ಷಕ ವರ್ಗದಲ್ಲಿ ಹಾಗೂ ಪೋಷಕರಲ್ಲಿ ಸಂತೋಷ ಉಂಟು ಮಾಡಿತ್ತು.
೯ನೇ ಹಾಗೂ ೧೦ನೇ ತರಗತಿಗಳು ಪ್ರಾರಂಭಿಕವಾಗಿ ಪ್ರಾರಂಭವಾಗಿದ್ದು, ಮಕ್ಕಳು ಕಡ್ಡಾಯವಾಗಿ ಸ್ಯಾನಿಟೈಜರ್ ಹಾಗೂ ಮಾಸ್ಕ್ ಧರಿಸಿಕೊಂಡು ಬರಬೇಕು. ಶಾಲಾ ಪ್ರವೇಶಿಸಿದ ಕೂಡಲೇ ಸಾಮಾಜಿಕ ಅಂತರ ಕಾಪಾಡಲೇಬೇಕು.ನೀರಿನ ಬಾಟಲ್ ಮನೆಯಿಂದಲೇ ತರಬೇಕು. ಅದನ್ನು ಯಾರ ಜತೆಗೂ ಹಂಚಿಕೊಳ್ಳಬಾರದು. ಶಾಲೆಗೆ ಬರುವ ಮುಂಚೆ ಶಿಕ್ಷಕರು ಕೊಟ್ಟ ಪಾಲಕರ ಅನುಮತಿ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ಕೋವಿಡ್ ನಿಯಮಾವಳಿಯನ್ನು ಮಕ್ಕಳಿಗೆ ಮುಖ್ಯ ಶಿಕ್ಷಕರು ತಿಳಿಸಿದರು.