ಸುರಪುರ : ಸರಕಾರದ ಆದೇಶದಂತೆ ಶ್ರೀಕೃಷ್ಣ ಜನ್ಮಾಷ್ಟಮಿ, ಡಿ.ದೇವರಾಜ್ ಅರಸು ಹಾಗೂ ಬ್ರಹ್ಮರ್ಷಿ ನಾರಾಯಣಗುರು ಈ ಮೂರು ಜನ ಆದರ್ಶನೀಯರ ಜಯಂತ್ಯುತ್ಸವನ್ನು ತಾಲೂಕು ಆಡಳಿತದ ವತಿಯಿಂದ ಸರಳವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.
ನಗರದ ತಹಸಿಲ್ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೇ ತಿಂಗಳು ೧೯ ರಂದು ಬೆಳಗ್ಗೆ ೧೦ ಗಂಟೆಗೆ ಶ್ರೀಕೃಷ್ಣ ಜಯಂತಿ, ೨೦ ರಂದು ಬೆಳಗ್ಗೆ ಡಿ. ದೇವರಾಜ್ ಅರಸು ಜಯಂತಿ ಮತ್ತು ೨೩ ರಂದು ಬೆಳಗ್ಗೆ ೧೦ ಗಂಟೆಗೆ ಬ್ರಹ್ಮರ್ಷಿ ಶ್ರೀ ನಾರಾಯಣಗುರುಗಳ ಜಯಂತಿ ಆಚರಿಸಲಾಗುವುದು ಎಂದರು.
ಶಾಲಾ-ಕಾಲೇಜು. ಗ್ರಾಮ ಪಂಚಾಯತಿ, ಅಂಗನವಾಡಿ ಸೇರಿದಂತೆ ಸರಕಾರಿ ಮತ್ತು ಅರೇ ಸರಕಾರಿ ಕಾರ್ಯಾಲಯಗಳಲ್ಲಿ ನಿಗದಿತ ದಿನಾಂಕದಂದು ಆಯಾ ಮಾಹತ್ಮರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಜಯಂತ್ಯುತ್ಸವ ಆಚರಿಸಬೇಕು ಎಂದು ಹೇಳಿದರು.
ನಂತರ ತಹಸಿಲ್ ಕಚೇರಿಯಲ್ಲಿ ನಡೆಯುವ ಜಯಂತಿಯಲ್ಲಿ ಎಲ್ಲಾ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ಸಮಾಜ ಬಾಂಧವರು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು ಈ ಮೂರು ಜಯಂತ್ಯುತ್ಸವಗಳಲ್ಲಿ ಭಾಗವಹಿಸಿ ಮಹಾತ್ಮರಿಗೆ ಗೌರವ ಸಲ್ಲಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಕೃಷಿ ಇಲಾಖೆ ಎಡಿ ಗುರುನಾಥ, ಸಮಾಜ ಕಲ್ಯಾಣಾಧಿಕಾರಿ ಸತ್ಯನಾರಾಯಣ ದರಬಾರಿ, ನಗರಸಭೆಯ ಗುರುಸ್ವಾಮಿ, ಮುಖಂಡರಾದ ರಮೇಶ ದೊರೆ ಆಲ್ದಾಳ, ಉಸ್ತಾದ್ ವಜಾಹತ್ ಹುಸೇನ್ ಸೇರಿ ಆಯಾ ಸಮಾಜಗಳ ಮುಖಂಡರು ಇದ್ದರು.
ಬಾದ್ಯಾಪುರದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ: ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ೨೦ ರಂದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.ದೇವರಾಜು ಅರಸ್ ಜಯಂತಿ ನಂತರ ೧೧ ಗಂಟೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಂದು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ತಿಳಿಸಿದರು.