ಸುರಪುರ: ಇಲ್ಲಿಯ ನಗರಸಭೆ ಕಾರ್ಯಾಲಯದ ಮುಂದೆ ನಗರಸಭೆಯ ಹೊರಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಪಾಲಿಕೆ,ನಗರಸಭೆ,ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆ ಅಂಗವಾಗಿ ನಗರಸಭೆ ಕಚೇರಿ ಮುಂದೆ ತಾಲೂಕು ಘಟಕ ಪ್ರತಿಭಟನೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಶಾಖಾನವರ ಮಾತನಾಡಿ,ನಮ್ಮ ಸಂಘದ ರಾಜ್ಯ ಸಮಿತಿಯೂ ಇಂದಿನಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದು,ಅದರ ಅಂಗವಾಗಿ ಇಲ್ಲಿಯೂ ನಮ್ಮ ತಾಲೂಕು ಘಟಕ ದಿಂದ ಪ್ರತಿಭಟನೆ ನಡೆಸಿ ನಗರಸಭೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಕಸ ಸಾಗಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು,ಲೋಡರ್ಸ್,ಕ್ಲೀನರ್ಸ್,ಹೆಲ್ಪರ್ಸ್,ಒಳಚರಂಡಿ ಕಾರ್ಮಿಕರು ಸೇರಿದಂತೆ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುವ ಎಲ್ಲರನ್ನು ನೇರ ಪಾವತಿಗೊಳಪಡಿಸಬೇಕು ಮತ್ತು ಖಾಯಂಗೊಳಿಸಬೇಕು,ಅಲ್ಲಿಯವರೆಗೂ ರಾಜ್ಯಾದ್ಯಂತ ಅನಿರ್ಧಿಷ್ಟ ಮುಷ್ಕರ ನಡೆಯುತ್ತಿದ್ದು ಇಲ್ಲಿಯೂ ಮುಷ್ಕರ ನಿರಂತರವಾಗಿ ನಡೆಯಲಿದೆ.ಇದು ನಾಳೆಯೂ ಮುಂದುವರೆಯಲಿದೆ ಎಂದು ತಿಳಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನಗರಸಭೆ ಎಇಇ ಶಾಂತಪ್ಪ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಮಲ್ಲಿಬಾವಿ,ಗೌರವಾಧ್ಯಕ್ಷ ಮೌನೇಶ ಕಟ್ಟಿಮನಿ ಸೇರಿದಂತೆ ಅನೇಕ ಪೌರಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.