ಸುರಪುರ: ರಾಜ್ಯದಲ್ಲಿನ ಬಿಜೆಪಿ ಸರಕಾರ ಪರಿಶಿಷ್ಟ ಜಾತಿಗಳಲ್ಲಿನ 101 ದಲಿತ ಬಲಗೈ ಸಮುದಾಯಕ್ಕೆ ಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯ ಮಾಡಿದೆ ಎಂದು ಭಾರತೀಯ ದಲಿತ ಪ್ಯಾಂಥರ್ಸ್ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ವಕೀಲರಾದ ಆದಪ್ಪ ಹೊಸ್ಮನಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು,ನ್ಯಾಯಮೂರ್ತಿ ನಾಗಮೋಹನದಾಸ್ ಮತ್ತು ಎ.ಜೆ ಸದಾಶಿವ ಆಯೋಗದ ವರದಿಯನ್ನು ಧಿಕ್ಕರಿಸಿ ರಾಜ್ಯ ಬಿಜೆಪಿ ಸರಕಾರ ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳನ್ನು ನಾಲ್ಕು ಗ್ರೂಪ್ಗಳಾಗಿ ವರ್ಗೀಕರಣಗೊಳಿಸಿದೆ.
ದಲಿತ ಬಲಗೈ ಸಮುದಾಯದ ಹೊಲೆಯ,ಹೊಲೇರ,ಹೊಲಯ ಮೂರು ಜಾತಿಗಳನ್ನು ಗ್ರೂಪ್-4 ಕ್ರಮ ಸಂಖ್ಯೆ 38 ರಲ್ಲಿ ನಮೂದಿಸುವ ಮೂಲಕ ಮೀಸಲಾತಿ ಸೌಲಭ್ಯದಿಂದ ಅನ್ಯಾಯ ಮಾಡಿದೆ.ಆದಿ ಕರ್ನಾಟಕ,ಚಲುವಾದಿ, ಮಹರ್,ಹೊಲೆಯ ಇವುಗಳನ್ನು ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಿಂದ ಕರೆಯುತ್ತಾರೆ,ಇವೆಲ್ಲವು ಒಂದೆಯಾಗಿರುತ್ತದೆ.ಕರ್ನಾಟಕದಲ್ಲಿ ಅತ್ಯಧಿಕ ಬಲಗೈ ಸಮುದಾಯದ ಜನಾಂಗ ಹೊಲೆಯ ಎಂದು ಜಾತಿ ಕಾಲಂನಲ್ಲಿ ಬರೆಯಿಸಿಕೊಂಡಿರುತ್ತಾರೆ.
ಕಾನೂನು ಸಚಿವರಾದ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು,ಆದರೆ ಯಾವುದೇ ಅಧ್ಯಾಯನ ಮಾಡದೆ ರಾಜಕೀಯ ಲಾಭಕ್ಕಾಗಿ ಗ್ರೂಪ್-2 ರಲ್ಲಿ ಬರಬೇಕಾದ ಹೊಲೆಯ ಜಾತಿಯನ್ನು ಶೇಕಡಾ 1 ರ ಮೀಸಲಾತಿ ಸೌಲಭ್ಯವಿರುವ ಗ್ರೂಪ್-4ರ ಕ್ರಮ ಸಂಖ್ಯೆ 38ರಲ್ಲಿ ತರಾತುರಿಯಲ್ಲಿ ಸೇರಿಸಿ ಒಳಮೀಸಲಾತಿ ಜಾರಿಗೆ ತಂದಿರುವುದು ಖಂಡನೀಯ.
ಆದ್ದರಿಂದ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿರುವುದನ್ನು ತಡೆಹಿಡಿದು ಗ್ರೂಪ್-2ರಲ್ಲಿ ಸೇರಿಸಿ ನ್ಯಾಯ ಒದಗಿಸಬೇಕೆಂದು ಮನವಿಡುತ್ತೇವೆ. ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.