ಕಲಬುರಗಿ; ವಿಧಾನಸಭೆ ಚುನಾವಣೆ ನಿಮಿತ್ಯ ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ಮತ್ತು ಅನ್ವಯವಾಗುವ ಇತರೆ ಕಾಯ್ದೆಯನ್ವಯ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಧಾರ್ಮಿಕ ಸಂಸ್ಥೆಗಳು (ದುರುಪಯೋಗ ತಡೆಗಟ್ಟುವಿಕೆ) ಕಾಯ್ದೆ-1988 ರ ಪ್ರಕಾರ ಧಾರ್ಮಿಕ ಸ್ಥಳವಾದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತರೆ ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ಸಂಪೂರ್ಣವಾಗಿ ನಿμÉೀಧಿಸಲಾಗಿರುತ್ತದೆ.
ಧಾರ್ಮಿಕ ಸಂಸ್ಥೆಗಳು (ದುರುಪಯೋಗ ತಡೆಗಟ್ಟುವಿಕೆ) ಕಾಯ್ದೆ-1988 ಕಾಯ್ದೆಯನ್ವಯ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಸಭೆ-ಸಮಾರಂಭ, ಉತ್ಸವ, ಮೆರವಣಿಗೆ ಹಾಗೂ ಜನ ಸಮೂಹ ಸೇರುವಿಕೆಯನ್ನು ನಿಷೇಧಿಸಿದ್ದು, ಧಾರ್ಮಿಕ ಸಂಸ್ಥೆಗಳ ವ್ಯವಸ್ಥಾಪಕರು/ ಮುಖ್ಯಸ್ಥರು ರಾಜಕೀಯ ಪ್ರಚಾರಕ್ಕಾಗಿ ಈ ಸ್ಥಳವನ್ನು ಬಳಸಲು ಅನುಮತಿ ನೀಡಬಾರದೆಂದು ಸ್ಪಷ್ಟಪಡಿಸಲಾಗಿದೆ. ಇದಲ್ಲದೇ ಧಾರ್ಮಿಕ ಸಂಸ್ಥೆಯ ಅನುದಾನ ಅಥವಾ ಇತರೆ ಆಸ್ತಿಗಳನ್ನು ಸಹ ಚುನಾವಣ ಪ್ರಚಾರಕ್ಕೆ ಬಳಸಲು ಅನುಮತಿ ನೀಡತಕ್ಕದ್ದಲ್ಲ. ಇದನ್ನು ಜಿಲ್ಲೆಯ ಎಲ್ಲಾ ಚುನಾವಣಾಧಿಕಾರಿಗಳು ಹಾಗೂ ಎಫ್.ಎಸ್.ಟಿ. ತಂಡಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.
ಧಾರ್ಮಿಕ ಸಂಸ್ಥೆಗಳ ಕುರಿತು ಮಾಹಿತಿ ಸಲ್ಲಿಸಬೇಕು:- ಇನ್ನು ಧಾರ್ಮಿಕ ಸಂಸ್ಥೆಗಳ ಕುರಿತಂತೆ ಸೆಕ್ಷನ್ 9ರ ಪ್ರಕಾರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು, ಪೊಲೀಸ್ ಠಾಣೆ ಹಾಗೂ ಎಫ್.ಎಸ್.ಟಿ. ತಂಡಗಳಿಗೆ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು/ವ್ಯವಸ್ಥಾಪಕರು/ಸಿಬ್ಬಂದಿಗಳು ಮಾಹಿತಿ ನೀಡಬೇಕು. ತಪ್ಪಿದ್ದಲ್ಲಿ ಐ.ಪಿ.ಸಿ. ಕಾಯ್ದೆ 176 ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ಎಚ್ಚರಿಕೆ ನೀಡಿದ್ದಾರೆ.