ಕಲಬುರಗಿ : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸರಕಾರಿ ವಸ್ತು ಸಂಗ್ರಹಾಲಯ ಕಲಬುರಗಿ ಹಾಗೂ ಇನ್ಟ್ಯಾಕ್ ಅಧ್ಯಾಯ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಂಪರೆ ದಿನಾಚರಣೆಯ ಅಂಗವಾಗಿ ಪಾರಂಪರಿಕ ನಡಿಗೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಹಪ್ತಗುಂಬಜ್ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಡಾ. ರಾಜಾರಾಮ ಉಪನಿರ್ದೇಶಕರು, ವಸ್ತುಸಂಗ್ರಹಾಲಯ ಇಲಾಖೆ, ಕಲಬುರಗಿ ಇವರು ‘ವಿಶ್ವಪರಂಪರೆಯ ದಿನಾಚರಣೆ’ಯನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ಸ್ಮಾರಕ, ಸಂಸ್ಕೃತಿ ಮತ್ತು ಪರಂಪರೆ ಹಾಗೂ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಿಳಿಹೇಳುವ ಸಲುವಾಗಿ ಇವುಗಳನ್ನು ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಐತಿಹಾಸಿಕ ಸ್ಮಾರಕಗಳು ನಮ್ಮ ದೇಶದ ಆಸ್ತಿ, ಎಂದು ಹೇಳುತ್ತಾ ಪರಂಪರೆ ನಡಿಗೆಗೆ ಚಾಲನೆ ನೀಡಿದರು. ಪರಂಪರೆ ನಡಿಗೆ ಕಾರ್ಯಕ್ರಮವು ಖಾಜಾ ಬಂದೇನವಾಜ ದರ್ಗಾದಿಂದ ಸಾಥ್ ಗುಂಬಜ್ವರೆಗೆ ನಡೆಯಿತು. ಸಾಥ್ ಗುಂಬಜ್ನಲ್ಲಿ ಸ್ಮಾರಕಗಳ ಕುರಿತು ಡಾ. ಶಂಭುಲಿಂಗ ಎಸ್. ವಾಣಿಯವರು ಉಪನ್ಯಾಸ ನೀಡಿದರು.
ಇಲ್ಲಿ ಬಹಮನಿ ಮನೆತನದ ಐದು ಸುಲ್ತಾನರ ಸಮಾಧಿಗಳಿವೆ. ಆದರೆ ಇಲ್ಲಿ ಏಳು ಗುಮ್ಮಟಗಳಿರುವುದರಿಂದ ಇದನ್ನು ಸಾಥ್ ಅಥವಾ ಹಫ್ತ ಗುಂಬಜ್ ಎಂದು ಕರೆಯುತ್ತಾರೆ. ಇದರಲ್ಲಿ ಫಿರೋಜ್ ಶಹಾನ ಸಮಾಧಿಯು ಅತ್ಯಂತ ಆಕರ್ಷಕವಾದುದು. ಸಂತ ಸುಲ್ತಾನನೆಂದು ಪ್ರಸಿದ್ಧಿ ಪಡೆದ ಫಿರೋಜ್ ಶಹಾನು ಒಬ್ಬ ವಿದ್ವಾಂಸ, ಬರಹಗಾರ, ಉಪನ್ಯಾಸಕ ಹಾಗೂ ತತ್ವಜ್ಞಾನಿಯಾಗಿದ್ದು, ಆತನ ದೂರದೃಷ್ಟಿಯ ಪ್ರತೀಕವಾಗಿ ನಗರದಲ್ಲಿ ಹಲವು ಕಟ್ಟಡಗಳು ರಚನೆಯಾಗಿವೆ ಎಂದು ಡಾ. ವಾಣಿಯವರು ತಮ್ಮ ಉಪನ್ಯಾಸದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಎಸ್. ಗುಳಶೆಟ್ಟಿ ಇನ್ಟ್ಯಾಕ್ ಅಧ್ಯಕ್ಷರು ಇವರು ಇನ್ಟ್ಯಾಕ್ ಕಾರ್ಯಕ್ರಮಗಳ ಕುರಿತು ಮಾತನಾಡಿದರು.
ಅಸಿತೋಷ ಭರತ ಭೂಷಣ ವಾಸ್ತುಶಿಲ್ಪ ಇವರು ಕಟ್ಟಡಗಳ ರಚನಾ ವಿಧಾನವನ್ನು ಕುರಿತು ಹೇಳಿದರು. ಕಾರ್ಯಕ್ರಮದಲ್ಲಿ ವಸ್ತುಸಂಗ್ರಹಾಲಯದ ಅಧಿಕಾರಿಗಳಾದ ಶಿವಪ್ರಕಾಶ, ಶಬ್ಬೀರ ಅಹಮ್ಮದ, ಜಿಲಾನಿ, ಹಿರಿಯ ನಾಗರಿಕರಾದ ರಾಚಪ್ಪ ಮೇಟೆಕರ್, ಮಲ್ಲಿಕಾರ್ಜುನ ಬಿ., ಶಾಂತಪ್ಪ., ರಾಮಲು ಪಿ. ಹಾಗೂ ವಾಸ್ತುಶಿಲ್ಪಿಗಳಾದ ಮಹಮ್ಮದ್ ಆಬಿದ್, ರಿತುಜಾ ಜಿ. ಮತ್ತು ಇನ್ ಟ್ಯಾಕಿನ ಪದಾಧಿಕಾರಿಗಳು ಸರಕಾರಿ ಸ್ವಾಯತ್ತ್ ಕಾಲೇಜು ಹಾಗೂ ಮಹಿಳಾ ಕಾಲೇಜಿನ ಇತಿಹಾಸ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಭಾಗವಹಿಸಿದರು.