ಕಲಬುರಗಿ: ಮಲೀನ ಮನಸ್ಸುಗಳು ಮತ್ತೆ ಮಿನುಗಬೇಕಾದರೆ ಹನ್ನೇರಡನೆಯ ಶತಮಾನದ ಬಸವಾದಿ ಶರಣರ ಚಿಂತನೆ ಮಾನಸಿಕ ಔಷಧಿಯಾಗಿದೆ. ಯುವ ಪೀಳಿಗೆ ಹಾಗೂ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಶರಣರು ಸಾರಿದ ವಚನಗಳ ಸಾರ ನಮ್ಮ ಮಾನಸಿಕ ನೆಮ್ಮದಿಗೆ ಪೂರಕವಾಗಿದೆ. ಹಿರಿಯರ ಜೀವನಾನುಭವ ತುಂಬಿದ ಮಾರ್ಗದರ್ಶನದಿಂದ ಇಂದಿನ ಯುವ ಜನತೆಗೆ ಚಿಂತನೆಯ ಸಾರ ತಲುಪಿಸುವ ಗುರಿಯನ್ನಿಟ್ಟುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ `ಸತ್ಯ ಚರಿತೆ ರಚನೆಯಲ್ಲಿ. ವಚನಜ್ಯೋತಿ ಯಾತ್ರೆ’ ಎಂಬ ವಚನ ಚಳವಳಿ ರೂಪದ ಕಾರ್ಯಕ್ರಮವೊಂದನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಸಮಾನತೆ, ಸ್ವಾತಂತ್ರ್ಯ , ಅಭಿವ್ಯಕ್ತಿ ಹಾಗೂ ವೈಚಾರಿಕ , ವೈಜ್ಞಾನಿಕ ಸ್ತಂಭಗಳ ಮೇಲೆ ಸಾಮಾಜಿಕ ಸೌಧ ಕಟ್ಟಲು ಪ್ರಯತ್ನಿಸಿದವರು ಬಸವಾದಿ ಶರಣರಾಗಿದ್ದಾರೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಾರಿದ್ದಾರೆ. ನುಡಿದಂತೆ ನಡೆದು, ನಡೆದಂತೆ ನುಡಿದು, ನಡೆ ಹಾಗೂ ನುಡಿಯಲ್ಲಿ ಸಾಮ್ಯತೆ ಮೆರೆದರು. ಲಿಂಗಬೇಧ, ವರ್ಣಬೇಧ, ಜಾತಿ ಬೇಧ ಮುಂತಾದ ಅಸಮಾನತೆಗಳನ್ನು ಅಲ್ಲಗಳೆದು ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿದ ಶರಣರ ಮಾರ್ಗ ಇಮದು ನಮ್ಮದಾಗಬೇಕಾಗಿದೆ. ಆ ಕಾರಣಕ್ಕಾಗಿ ಇಂಥ ಅನೇಕ ಸಾಮಾಜಿಕ ಸಂದೇಶಗಳನ್ನು ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಈ ಕಾರ್ಯಕ್ರಮದ್ದಾಗಿದೆ.
ಜುಲೈ 22 ರಂದು ಬೆಳಗ್ಗೆ 10.45 ಕ್ಕೆ ಜಿಲ್ಲೆಯ ಕಾಳಗಿ ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಈ ವಚನಜ್ಯೋತಿ ಯಾತ್ರೆಗೆ ಚಾಲನೆ ನೀಡಲಾಗುತ್ತಿದ್ದು, ಅಂದಿನಿಂದ ಜಿಲ್ಲೆಯ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಈ ಯಾತ್ರೆ ಮುಂದುವರಿಯಲಿದೆ ಎಂದು ಅವರು ವಿವರಿಸಿದ್ದಾರೆ.