ಕಮಲಾಪೂರ: ಚಲನಚಿತ್ರಗಳಲ್ಲಿ ಬರುವ ಹಿರೋಗಳೆಲ್ಲ ನಿಜವಾದ ಹೀರೋಗಳಲ್ಲ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತ ಮಾತೆಯ ವೀರ ಪುತ್ರರಾದ ಸ್ವಾತಂತ್ರ್ಯ ಹೋರಾಟಗಾರರೇ ನಿಜವಾಗಿ ನಮ್ಮ ದೇಶದ ಹೀರೋಗಳು ಎಂದು ಕಲಬುರಗಿ ಯಜ್ಞ ತಂಡದ ಸದಸ್ಯೆ ಭಾರ್ಗವಿ ಕುಲಕರ್ಣಿ ಹೇಳಿದರು.
ಗುರುವಾರ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ಮಾದರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಾಗಾಂವ ಕಸಾಪ ವಲಯದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯದ ಸಾರ್ಥಕತೆ ಕುರಿತು ವಿಶೇಷ ಉಪನ್ಯಾಸ ಹಾಗೂ ಕಬಡ್ಡಿ ಆಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಭಾರತೀಯರಲ್ಲಿನ ಆಂತರಿಕ ಕಲಹಗಳನ್ನು ಅರಿತು ನಮ್ಮ ನಮ್ಮಲ್ಲೆ ಜಗಳ ಹಚ್ಚಿ ಇಡೀ ದೇಶವನ್ನೇ ತಮ್ಮ ಮುಷ್ಠಿಯಲ್ಲಿ ಹಿಡಿದು ನಮ್ಮನ್ನೆ ಗುಲಾಮರನ್ನಾಗಿಸಿದರು, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹೋರಾಟಕ್ಕೆ ಮಣಿದು ಭಾರತವನ್ನು ಬಿಟ್ಟು ತೊಲಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಬಡ್ಡಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಇಲ್ಲಿನ ಶಾಲಾ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಸುರೇಶ ಲೇಂಗಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಹಾಗಾಂವ ಕ್ರಾಸ್ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ ಬಿರಾದರ, ಕಸಾಪ ಜಿಲ್ಲಾ ಪದಾಧಿಕಾರಿ ರಾಜೇಂದ್ರ ಮಾಡಬೂಳ, ಜ್ಯೋತಿ ಕೋಟನೂರ ಇದ್ದರು.
ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ್ ಬಿರಾದರ ಪ್ರಾರ್ಥನಾ ಗೀತೆ ಹಾಡಿದರು,ಸುನಂದಾ ರಟಕಲ ಸ್ವಾಗತಿಸಿದರು, ರವಿಂದ್ರ ಬಿಕೆ ನಿರೂಪಿಸಿದರು.