ಕಲಬುರಗಿ: 2006ರ ಪೂರ್ವದ ಶಾಲೆ-ಕಾಲೇಜುಗಳಿಗೆ ನೇಮಕಾತಿಯಾಗಿ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಪಿಂಚಣಿ ಸೌಲಭ್ಯ ಸೇರಿ ಯಾವುದೇ ಸರಕಾರಿ ಸೌಲಭ್ಯಗಳು ಸಿಕ್ಕಿಲ್ಲ. ಹೀಗಾಗಿ ಸರಕಾರ ನಿವೃತ್ತ ಮತ್ತು ಸೇವೆಯಲ್ಲಿರುವ ನೌಕರರಿಗೆ ಹಳೆ ಪಿಂಚಣಿ ಸೇರಿ ಸರ್ಕರಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿ ಆ.29ರಂದು ನೌಕರರ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು 2006 ಪೂರ್ವದ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ ರಾಜ್ಯ ಗೌರವಾಧ್ಯಕ್ಷ ಪಿ.ಎಸ್.ಕೋಟನೂರ ತಿಳಿಸಿದರು.
ಆ.29ರಂದು ಮೈಸೂರಿನ ಸುತ್ತೂರು ಮಠದಲ್ಲಿ ಸಮಾವೇಶ ನಡೆಯಲಿದೆ. ಜಿಲ್ಲೆಯಿಂದ 2000ಕ್ಕೂ ಅಧಿಕ ನೌಕರರು ತೆರಳಲಿದ್ದಾರೆ. ಸಮಾವೇಶದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಕಾಲೇಜು, ಬಿಇಡ್, ವೃತ್ತಿಪರ ಕೋರ್ಸ್ ಪಿಂಚಣಿ ವಂಚಿತ ಸುಮಾರು 10 ಸಾವಿರಕ್ಕೂ ಅಧಿಕ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 15-20 ವರ್ಷಗಳಿಂದ ವೇತನವಿಲ್ಲದೆ ಸೇವೆ ಸಲ್ಲಿಸಿದ್ದೇವೆ. ಈಗಾಗಲೇ ನೂರಾರು ನೌಕರರು 7ರಿಂದ 8 ವರ್ಷ ಸೇವೆ ಸಲ್ಲಿಸಿ ಸರಕಾರಿ ಸೌಲಭ್ಯವಿಲ್ಲದೆ ಹೊರಬಂದಿದ್ದೇವೆ. ಸದ್ಯ ನಮ್ಮ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಸರಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷ ಮರೆಪ್ಪ ಎಂ.ಬಸವಪಟ್ಟಣ, ಬಿ.ಜಿ.ಪಾಟೀಲ್, ಚಂದ್ರಶೇಖರ ಗಾರಂಪಳ್ಳಿ, ಲಕ್ಷ್ಮಿಕಾಂತ ಇತರರಿದ್ದರು.