ಸತೀಶ ಚಪ್ಪರಿಕೆಯವರ ಘಾಂದ್ರುಕ್ ಕಾದಂಬರಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ವಿಕ್ರಮ ವಿಸಾಜಿ ಅಭಿಮತ
ಕಲಬುರಗಿ: ವಿಭಿನ್ನ ವಸ್ತು, ಕಾರ್ಪೋರೆಟ್ ಜಗತ್ತು, ವೈಯಕ್ತಿಕ ತಲ್ಲಣವನ್ನು ಮುಖಾ ಮುಖಿಯಾಗಿಸುವ ಘಾಂದ್ರುಕ್ ಕಾದಂಬರಿಯು ಆದ್ಯಾತ್ಮಿಕ ಸ್ಪರ್ಶದ ಜೊತೆಗೆ ಈ ಕಾಲದ ಸಂಕಟವನ್ನು ಕೂಡ ಹೇಳುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ತಿಳಿಸಿದರು.
ಸಪ್ನಾ ಬುಕ್ ಹೌಸ್ ಹಾಗೂ ಅಂಕಿತಾ ಪುಸ್ತಕ ಆಶ್ರಯದಲ್ಲಿ ನಗರದ ಸಪ್ನಾ ಬುಕ್ ಹೌಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸತೀಶ ಚಪ್ಪರಿಕೆಯವರ ಘಾಂದ್ರುಕ್ ಕಾದಂಬರಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪುಸ್ತಕ ಕುರಿತು ಮಾತನಾಡಿದ ಅವರು, ಈ ಕಾದಂಬರಿಯಲ್ಲಿ ಎಲ್ಲ ವಲಯಗಳ ದಟ್ಟ ಅನುಭವಗಳನ್ನು ಒಟ್ಟಾಗಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾದಂಬರಿಯ ಕಥಾ ನಾಯಕ ಬಹುದೊಡ್ಡ ಉದ್ಯಮಿಯಾಗಿದ್ದು, ಬದುಕಿನಲ್ಲಿ ಏನೆಲ್ಲ ಗಳಿಸಿದ್ದರೂ ಮನಸ್ಸಿಗೆ ಶಾಂತಿ, ಪ್ರೇಮ, ಸಂತೃಪ್ತ್ತಿ ಹುಡುಕುತ್ತ ನೇಪಾಳದ ಹಿಮಾಲಯ ತಪ್ಪಲಿಗೆ ಟ್ರಕ್ಕಿಂಗ್ಗೆ ತೆರಳುತ್ತಾನೆ. ಆದರೆ ಅಲ್ಲಿಯೂ ನಾಯಕನಿಗೆ ಜೀವನದ ಘಟನೆಗಳು ನೆನಪಾಗುತ್ತವೆ. ಮತ್ತೆ ಯಾವುದರಲ್ಲೂ ಸುಖವಿಲ್ಲ ಎಂದೆನಿಸುತ್ತದೆ. ಹೀಗೆ ಯಾವ ಪ್ರೇಮದಲ್ಲೂ ಸುಖವಿಲ್ಲ ಎಂಬ ಸಂಕೀರ್ಣ ಬದುಕಿನ ಚಿತ್ರಣ ಈ ಕಾದಂಬರಿಯ ವಸ್ತು ಆಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ. ಪೋತೆ ಮಾತನಾಡಿ, ಮನುಷ್ಯ ಏನೆಲ್ಲ ಸಾಧಿಸಿದ ನಂತರ ನೆಮ್ಮದಿ ಕಡೆ, ಶೂನ್ಯದ ಕಡೆ ಕ್ರಮಿಸುತ್ತಾನೆ. ಆಗ ಅವನಲ್ಲಿ ಉಂಟಾಗುವ ತಳವಳ, ತುಮಲವನ್ನು ವಿವರಿಸುವ ಕಾದಂಬರಿ ಇದಾಗಿದ್ದು, ಮನುಷ್ಯ ಎತ್ತರಕ್ಕೆ ಬೆಳೆದಷ್ಟು ಸಂಬಂಧಗಳು ದೂರ ಆಗುತ್ತವೆ. ಆದರೆ ಮನುಷ್ಯತ್ವಕ್ಕಿಂತ ದೊಡ್ಡದು ಯಾವುದಿಲ್ಲ ಎಂಬುದನ್ನು ಈ ಕಾದಂಬರಿ ಹೇಳುವಂತಿದೆ. ಇಲ್ಲಿನ ಭಾಷೆ ಓದಿಸಿಕೊಂಡು ಹೋಗುವಂತಿದೆ ಎಂದರು.
ಡಾ. ಶ್ರೀಶೈಲ ನಾಗರಾಳ ನಿರೂಪಿಸಿ ವಂದಿಸಿದರು. ಬಾಬುರಾವ ಯಡ್ರಾಮಿ, ಕುಮಾರ ಬುಡಿಕಟ್ಟಿ, ಶಂಕ್ರಯ್ಯ ಘಂಟಿ, ಶಾಂತಾ ಭೀಮಸೇನರಾವ, ಡಾ. ಶಿವರಂಜನ್ ಸತ್ಯಂಪೇಟೆ, ಸಂಗಮನಾಥ ರೇವತಗಾಂವ, ಡಾ. ಗವಿಸಿದ್ಧ ಪಾಟೀಲ ಸೇರಿದಂತೆ ಅನೇಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸದ್ಯ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ವಿವಿಧ ರಾಷ್ಟ್ರಗಳ ಪ್ರಮುಖರನ್ನು ಆಹ್ವಾನಿಸಿ ಒಟ್ಟಾಗಿ ಇರುವುದು ಅಗತ್ಯ ಎಂಬುದನ್ನು ಒಪ್ಪಿಕೊಳ್ಳುವ ನಾವು ಈ ದೇಶದಲ್ಲಿನ ಅಸ್ಪøಶ್ಯರನ್ನು ಒಟ್ಟಾಗಿಟ್ಟುಕೊಂಡು ಹೋಗುವುದನ್ನು ಯಾಕೆ ಒಪ್ಪುತ್ತಿಲ್ಲ. -ಡಾ. ಎಚ್.ಟಿ. ಪೋತೆ, ಹಿರಿಯ ಲೇಖಕ, ಕಲಬುರಗಿ.