ವಾಡಿ: ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದ ಘಟನೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಿದೆ.
ಹಳಕರ್ಟಿ ಗ್ರಾಮದ ಗ್ರಾಪಂ ಕಚೇರಿ ಮುಂದಿರುವ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಫ್ಲೆಕ್ಸ್ ಭಾವಚಿತ್ರ ಪಲಕ ಅಳವಡಿಸಲಾಗಿದೆ. ಯಾರೋ ಕಿಡಿಗೇಡಿಗಳು ಮಂಗಳವಾರ ತಡರಾತ್ರಿ ಬಸವೇಶ್ವರರ ಮುಖಕ್ಕೆ ಕಪ್ಪು ಚುಕ್ಕಿ ಕೊರೆದಿದ್ದಾರೆ. ಬೀಡಿ ಅಥವ ಸಿಗರೆಟ್ ಬೆಂಕಿಯಿಂದ ಮುಖವನ್ನು ಸುಟ್ಟು ಚುಕ್ಕೆ ರೂಪದಲ್ಲಿ ವಿರೂಪಗೊಳಿಸಿದ್ದು ಕಂಡು ಬಂದಿದೆ.
ಬುಧವಾರ ಬೆಳಗ್ಗೆ ಗಮನಿಸಿದ ಗ್ರಾಮಸ್ತರು, ದುಷ್ಕೃತ್ಯವನ್ನು ಖಂಡಿಸಿ ಪ್ರತಿಭಟನೆಗಿಳಿದರು. ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ದಿಢೀರ್ ಪ್ರತಿಭಟನೆಗಿಳಿದರು. ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಿಂದಾಗಿ ನೂರಾರು ವಾಹನಗಳು ನಿಲುಗಡೆಯಾಗಿ ಟ್ರಾಫಿಕ್ ಜಾಮ್ ಸೃಷ್ಠಿಯಾಗಿದೆ.