ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಸಿಐಡಿ ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಸಿಐಡಿ ಅಧಿಕಾರಿಗಳು ಆರ್ ಡಿ ಪಾಟೀಲ್ ನನ್ನು ವೈದ್ಯಕೀಯ ತಪಾಸಣೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆತಂದರು. ವೈದ್ಯಕೀಯ ತಪಾಸಣೆ ತೇರಳುವ ಮುನ್ನ ಆರ್ ಡಿ ಪಾಟೀಲ್ ಮಾಧ್ಯಮದ ಮುಂದೆ ಹೇಳಿಕೆ ನೀಡಿ, ಏನ್ ಸರ್ ಇದು ಇಲ್ಲಿ ಹೆರೆಸೆಮೆಂಟ್ ಇದು. ಇಲ್ಲಿಗಲ್ ಅರೆಸ್ಟ್ , ಇಲ್ಲಿಗಲ್ ಎಫ್ಐಆರ್ ಹಾಕಿರೋದು. ಅಮಾಯಕರನ್ನ ಅರೆಸ್ಟ್ ಮಾಡಿ ವೈಟ್ ಪೇಪರ್ ಮೇಲೆ ಸಹಿ ಪಡೆದಿದ್ದಾರೆ. ನೀನು ಇದರಲ್ಲಿ ಭಾಗಿಯಾಗಿದ್ದಿಯಾ ಅಂತಾ ಸುಳ್ಳು ಆರೋಪ ಮಾಡಿದ್ದಾರೆ. ಅವನ್ಯಾವನೋ ರುದ್ರಗೌಡ ಅಂತಾ ಜೆಇ ಸುಮ್ಮನೆ ಅರೆಸ್ಟ್ ಮಾಡಿದ್ದಾರೆ. ಇದೆಲ್ಲ ಇಲ್ಲಿಗಲ್ ಎಂದು ಸಿಐಡಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಕೆಇಎ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತ ಜೆಇ ರುದ್ರಗೌಡನನ್ನು ಸಿಐಡಿ ಕಛೇರಿಯಲ್ಲಿ ಕಂಡು ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಶಾಕ್ ಆಗಿದ್ದಾನೆ. ಬಂಧಿತ ಜೆಇ ರುದ್ರಗೌಡ ಮಂಗಾ ಮನೆಯಲ್ಲಿ ಸಿಐಡಿ ಶೋಧ ನಡೆಸಿದ ಸಂದರ್ಭದಲ್ಲಿ ಕೆಇಎ ಪರೀಕ್ಷೆಯ 17 ಹಾಲ್ ಟಿಕೇಟ್ ಗಳು ಪತ್ತೆಯಾಗಿದ್ದವು.
ಇನ್ನು ಈ 17 ಅಭ್ಯರ್ಥಿಗಳ ಜೊತೆ ಡೀಲ್ ಬಗ್ಗೆ ಜೆಇ ರುದ್ರಗೌಡ ಮಂಗಾ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ರುದ್ರಗೌಡನ ಮನೆಯಲ್ಲಿ ಸಿಕ್ಕ 17 ಹಾಲ್ ಟಿಕೆಟ್ ಗಳ ಬಗ್ಗೆ ನನಗೆ ಗೊತ್ತಿಲ್ಲ, ಅದಕ್ಕೂ ನನಗೂ ಸಂಬಂಧವೇ ಇಲ್ಲ. ಇದು ರುದ್ರಗೌಡ ಸ್ವತಂತ್ರವಾಗಿ ಮಾಡಿಕೊಂಡಿರುವ ಡೀಲ್ ಗಳು ಎಂದು ಸಿಐಡಿ ವಿಚಾರಣೆ ವೇಳೆ ಆರ್.ಡಿ ಪಾಟೀಲ್ ವಾದ ಮಾಡುತ್ತಿದ್ದಾನೆ ಎಂದು ತಿಳಿದ ಬಂದಿದೆ.
ಸದ್ಯ ಜೆಇ ರುದ್ರಗೌಡನ ಮನೆಯಲ್ಲಿ ಸಿಕ್ಕ 17 ಹಾಲ್ ಟಿಕೆಟ್ ಗಳ ಹಿಂದಿನ ರಹಸ್ಯ ಬೇಧಿಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದು, ಈ ಹಾಲ್ ಟಿಕೆಟ್ ನ ಅಭ್ಯರ್ಥಿ ಹೆಸರು, ವಿಳಾಸ, ಅವರುಗಳ ಹಿನ್ನಲೆ, ಬೇರೆ ಬೇರೆಯವರೊಂದಿಗಿನ ಸಂಪರ್ಕಗಳ ಜಾಡು ಹಿಡಿದು ಸಿಐಡಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.
ಪೇದೆಯಿಂದ ಆರ್ ಡಿ ಪಾಟೀಲ್ ಗೆ ಸಲಾಂ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಗೆ ಪೊಲೀಸ್ ಕಾನ್ಸಟೇಬಲ್ ಒಬ್ಬರು ಸಲಾಂ ಹೊಡೆದಿರುವ ಘಟನೆ ಶುಕ್ರವಾರ ನಡೆದಿದೆ.
ಆರ್ ಡಿ ಪಾಟೀಲ್ ನನ್ನು ನಗರದ ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಾಗ ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ಕಾನ್ಸಟೇಬಲ್ ನಮಸ್ಕಾರ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯೊಬ್ಬರು ಅಕ್ರಮ ಪ್ರಕರಣದ ಪ್ರಮುಖ ಆರೋಪಿಯನ್ನು ನಮಸ್ಕಾರ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.