ಪ್ರತಿಭಾ ಕಾರಂಜಿ: ಮಕ್ಕಳ ಸಾಂಸ್ಕೃತಿಕ ಪ್ರತಿಭೆಗೆ ಪುರಸ್ಕಾರವೇ ಗರಿಮೆ

0
180

ವಾಡಿ: ಪ್ರತಿಭಾವಂತ ಮಕ್ಕಳು ಮಾತ್ರ ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ಅರ್ಹರರು. ಮಗುವಿನ ಸಾಧನೆಯ ಗರಿಮೆಗೆ ಪ್ರೋತ್ಸಾಹವೇ ಮೆಟ್ಟಿಲು ಎಂದು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಹೇಳಿದರು.

ಪಟ್ಟಣದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಾಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಓದು ಬರಹ ಎಂಬುದು ವಿದ್ಯಾರ್ಥಿಯ ನಿತ್ಯದ ಕಾಯಕ. ಅದರೊಟ್ಟಿಗೆ ಆಟಕ್ಕೂ ಪ್ರಾಮುಖ್ಯತೆ ನೀಡಬೇಕು. ತರಗತಿ ಶಿಕ್ಷಕರಾದವರು ತಮ್ಮ ಶಿಷ್ಯಂದಿರಲ್ಲಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣ ಇಲಾಖೆ ಕಲ್ಪಿಸಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನವಾಗಬೇಕು. ಅಂದಾಗ ಮಾತ್ರ ಸಾಂಸ್ಕೃತಿಕ ಲೋಕಕ್ಕೆ ಹೊಸ ಕಲಾವಿದರನ್ನು ಕೊಟ್ಟಂತಾಗುತ್ತದೆ. ಪ್ರತಿಭೆ ಎಂಬುದು ಬದುಕನ್ನು ಬಲು ಎತ್ತರಕ್ಕೆ ಕರೆದೊಯ್ಯುತ್ತದೆ ಎಂದು ವಿವರಿಸಿದರು.

Contact Your\'s Advertisement; 9902492681

ಉರ್ದು ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಮಹ್ಮದ್ ಅಯ್ಯೂಬ್ ಮಾತನಾಡಿ, ಪ್ರತಿಭೆಯೊಂದಿದ್ದರೆ ನೀವು ಕಸದಲ್ಲಿ ಬಿದ್ದರೂ ಅದು ಅರಮನೆಗೆ ತಂದು ನಿಲ್ಲಿಸುತ್ತದೆ. ರೈಲು ನಿಲ್ದಾಣದಲ್ಲಿ ಸಿನೆಮಾ ಹಾಡು ಹೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಪಶ್ಚಿಮ ಬಂಗಾಳದ ರಾನಾ ಮಂಡಲ್ ಎಂಬ ಭಿಕ್ಷುಕಿ ಇಂದು ದೇಶದಾದ್ಯಂತ ಮನೆಮಾತಾಗುವಂತೆ ಮಾಡಿದ್ದು ಇದೇ ಪ್ರತಿಭೆ ಎಂಬುದು ಮಕ್ಕಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಸನ್ನತಿ ಅಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷ ಟೋಪಣ್ಣ ಕೋಮಟೆ ಮಾತನಾಡಿ, ಸಾಂಸ್ಕೃತಿಕ ಲೋಕದ ಶ್ರೀಮಂತಿಕೆ ಹೆಚ್ಚಿಸಲು ಮಕ್ಕಳ ಪ್ರತಿಭೆ ಅನಾವರಣಗೊಳ್ಳಬೇಕು. ಸರಕಾರ ನೀಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಕ್ಕಳು ಸಾಧನೆಯತ್ತ ಸಾಗಬೇಕು ಎಂದರು.

ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೋಡ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಭಗವಾನ ದಂಡಗುಲಕರ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೋಮಯ್ಯ ಹಿರೇಮಠ, ತಾಲೂಕು ಅಧ್ಯಕ್ಷ ಪ್ರಮೋದಕುಮಾರ, ಮುಖ್ಯಶಿಕ್ಷಕರಾದ ಶಹನಾಜ್ ಬೇಗಂ, ಎನ್.ಸಿ.ಪಾಟೀಲ ಹಾಗೂ ವಿಶ್ವನಾಥ ಪೊದ್ದಾರ, ಸಂಗಣ್ಣ ಸಂಗಾವಿ, ಸುನೀಲ ರಾಠೋಡ, ಸಿದ್ದಾರೂಢ, ಇಂದ್ರಾಬಾಯಿ, ಜಮುನಾ, ಭಾಗೀರತಿ, ರಾಜೇಶ್ರೀ, ಅಫ್ಸಾನಾ, ಮಹ್ಮದ್ ರಸೀದ್ ಪಾಲ್ಗೊಂಡಿದ್ದರು. ಸಿಆರ್‌ಪಿ ಹೇಮಂತಕುಮಾರ ಬಿ.ಕೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸಂತೋಷ ಕೋಮಟೆ ಸ್ವಾಗತಿಸಿದರು. ಶಿವಾನಂದ ನಿರೂಪಿಸಿದರು. ವಿವಿಧ ಶಾಲೆಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ನಾಟಕ, ನೃತ್ಯ, ಹಾಡು, ಆಶುಭಾಷಣ, ಕ್ಲೇಮಾಡಲಿಂಗ್, ಸಾಮೂಹಿಕ ಜಾನಪದ ನೃತ್ಯ, ಕೋಲಾಟ ಹೀಗೆ ಹಲವು ಪ್ರದರ್ಶನಗಳನ್ನು ನೀಡಿ ಪ್ರತಿಭೆ ಮೆರೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here