ಸುರಪುರ:ತಾಲೂಕಿನ ಹೆಗ್ಗಣದೊಡ್ಡಿ ಗ್ರಾಮ ಪಂಚಾಯತಿಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಕೂಡಲೇ ಇದನ್ನು ತನಿಖೆಗೊಳಪಡಿಸುವಂತೆ ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ ಆಗ್ರಹಿಸಿದರು.
ನಗರದ ತಾಲೂಕು ಪಂಚಾಯತಿ ಕಚೇರಿ ಮುಂದೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ,ಹೆಗ್ಗಣದೊಡ್ಡಿ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯ ಅನುದಾನ ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳಲಾಗಿದೆ,ಉದ್ಯೋಗ ಖಾತ್ರಿ ಕಾಮಗಾರಿಗಳು ನಿರ್ಮಿಸದೆ ಹಳೆಯ ಕಾಮಗಾರಿಗಳ ಹೆಸರಲ್ಲಿ ಹಣ ಲಪಟಾಯಿಸಿದ್ದಾರೆ.ಮನೆಗಳಲ್ಲಿ ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಬಲಾಢ್ಯರಿಗೆ ಅನುದಾನ ನೀಡಿ ಅಗತ್ಯ ಇರುವವರಿಗೆ ವಂಚಿಸಲಾಗಿದೆ ಎಂದು ಆರೋಪಿಸಿ ಈ ಗ್ರಾಮ ಪಂಚಾಯತಿಯ ಪಿಡಿಓ ಮತ್ತು ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಮರಲಿಂಗ ಗುಡಿಮನಿ ಮಾತನಾಡಿ,ಹೆಗ್ಗಣದೊಡ್ಡಿ ಗ್ರಾಮ ಪಂಚಾಯತಿಯಲ್ಲಿ ಉಳ್ಳವರಿಗೆ ಸೌಲಭ್ಯ ಉಳಿದವರಿಗೆ ಏನಿಲ್ಲ ಎನ್ನುವಂತ ಸ್ಥಿತಿ ಇದೆ,ಅದರಂತೆ ದೇವತ್ಕಲ್ ಗ್ರಾಮ ಪಂಚಾಯತಿಯಲ್ಲಿಯೂ ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಕೂಡಲೇ ಈ ಎರಡು ಗ್ರಾಮ ಪಂಚಾಯತಿಯಲ್ಲಿನ ಭ್ರಷ್ಟಾಚಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ದಲಿತ ಸೇನೆ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯತಿ ಇಓ ಬಸವರಾಜ ಸಜ್ಜನ್ ಆಗಮಿಸಿ,ಮನವಿ ಆಲಿಸಿ ಹೆಗ್ಗಣದೊಡ್ಡಿ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಕ್ರಮಕ್ಕೆ ದಲಿತ ಸೇನೆ ಆಗ್ರಹಿಸಿರುವುದನ್ನು ಹೆಸರಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಮಾಡಿರುವುದನ್ನು ಹೋರಾಟಗಾರರಿಗೆ ಹಿಂಬರಹ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹುಲಗಪ್ಪ ದೇವತ್ಕಲ್,ಜುಮ್ಮಣ್ಣ ಕಟ್ಟಿಮನಿ,ವಿರೇಶ ಗುಳಬಾಳ,ತೇಜು ಹೊಸಮನಿ,ಅಮರೇಶ ಬೂದನೂರ,ಪರಶುರಾಮ ಬೋನಾಳ,ಭೀಮರಾಯ ಹೆಚ್.ದೇವಾಪುರ,ತಿಮ್ಮಣ್ಣ,ಲೋಕೇಶ,ಮೌನೇಶ,ಸುಭಾಷ್,ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.