ಸುರಪುರ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು ಹಾಗೂ ಪ್ರಾಥಮಿಕ ಹಂತದಲಿಯೇ ಕನ್ನಡದ ಭಾಷಾಭಿಮಾನ ಬೆಳೆಸುವುದು ಅವಶ್ಯಕವಾಗಿದೆ ಎಂದು ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ನಗರದ ತಿಮ್ಮಾಪೂರದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕಲ್ಪ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಹಿರಿದಾದ ಇತಿಹಾಸ, ಭವ್ಯ ಸಂಸ್ಕೃತಿ ಇದೆ ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡವಾಗಿದ್ದು, ಈ ನೇಲದ ಪ್ರತಿಯೊಬ್ಬರು ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಗುರುಗಳಾದ ಮುದ್ದಪ್ಪ ಅಪ್ಪಾಗೋಳ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಸುಸಂದರ್ಭದಲ್ಲಿ ನಾಡಿನ ತುಂಬಾ ಕನ್ನಡ ಸಂಭ್ರಮಿಸಬೇಕು, ಕನ್ನಡ ಮಾತೃಭಾಷೆ ಹೊತೆಗೆ ಅನ್ನದ ಭಾಷೆಯಾಗಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಿವಶರಣಪ್ಪ ಹೆಡಿಗಿನಾಳ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸಂಘಟಕ ಮಲ್ಲು ಬಾದ್ಯಾಪೂರ, ರಾಜು ದೇವರಗೋನಾಲ, ಎಸ್.ಡಿ.ಎಂ.ಸಿ ಅಧ್ಯಕ್ಷ ನಿಂಗಣ್ಣ ಮಾಲಗತ್ತಿ ಹಾಗೂ ಯಂಕಪ್ಪ ಎಲಿತೋಟದ ವೇದಿಕೆಮೇಲಿದ್ದರು.
ಕಾರ್ಯಕ್ರಮವನ್ನು ಸಿದ್ದಣಗೌಡ ಪಾಟೀಲ್ ನಿರೂಪಿಸಿ ವಂದಿಸಿದರು, ಸ್ಥಳಿಯ ಶಾಲಾ ಮಕ್ಕಳಿಂದ ಕನ್ನಡ ಗೀತಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.